ಬಸವಕಲ್ಯಾಣ: ಮಂಗಗಳ ಹಾವಳಿ ಈಚೆಗೆ ಹೆಚ್ಚಿದೆ. ಒಂದರನಂತರ ಇನ್ನೊಂದರಂತೆ ಓಡುತ್ತ, ಜಿಗಿಯುತ್ತ ಮನೆ ಮಾಳಿಗೆಗಳ ಮೇಲೆ ಬರುವ ಮಂಗಗಳು ಜನರೊಂದಿಗೆ ಸ್ನೇಹ ಬೆಳೆಸುತ್ತಿರುವ ಕಾರಣ ಆಶ್ಚರ್ಯ ವ್ಯಕ್ತಪಡಿಸಲಾಗುತ್ತಿದೆ.
ಒಂದೆರಡು ವರ್ಷಗಳ ಹಿಂದೆ ಊರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾನರಗಳು ಓಡಾಡುತ್ತಿರಲಿಲ್ಲ. ಅವು ಊರೊಳಗೆ ಬಂದರೂ ಅವುಗಳನ್ನು ಓಡಿಸಲಾಗುತ್ತಿತ್ತು. ಅವು ಸಹ ರೋಷಗೊಂಡು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕಚ್ಚಲು ಬೆನ್ನು ಹತ್ತುತ್ತಿದ್ದವು.
ಆದರೆ ಈಚೆಗೆ ಇಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಹಿಂಡುಗಟ್ಟಿ ಓಡಾಡುವ ಮಂಗಗಳು ಮನೆ, ಹೋಟೆಲ್ ಮತ್ತು ಅಂಗಡಿಗಳ ಬಾಗಿಲಲ್ಲಿ ಹೋಗಿ ಕುಳಿತುಕೊಳ್ಳುತ್ತಿವೆ. ಅಂಗಡಿಯವರು ಕೊಡುವ ಹಣ್ಣು, ಕೊಬ್ಬರಿ ಇತ್ಯಾದಿ ತಿನಿಸು ತಿಂದು ಕೆಲಕಾಲ ಅಲ್ಲಿಯೇ ಕುಳಿತು ಕೊಳ್ಳುತ್ತಿರುವ ಕಾರಣ ಜನರು ಕುತೂಹಲದಿಂದ ನೋಡುತ್ತಿದ್ದರೆ ಅಂಗಡಿ ಮಾಲೀಕ ಖುಷಿಗೊಳ್ಳುತ್ತಿದ್ದಾನೆ.
ಶುಕ್ರವಾರ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಮೀಪದ ಅಂಗಡಿಯ ಎದುರು ಕೆಲ ವಾನರಗಳು ಬಂದು ಕುಳಿತಿದ್ದವು. ಅಂಗಡಿ ಮಾಲೀಕ ಮತ್ತು ಒಬ್ಬ ಬಾಲಕ ಅವುಗಳ ಕೈಯಲ್ಲಿ ತಿನಿಸು ಕೊಟ್ಟು ಖುಷಿಪಟ್ಟರು. ಇದನ್ನು ನೋಡಿದ ಬೇರೆಯವರ ಮುಖದಲ್ಲೂ ಮುಗುಳ್ನಗು ಮೂಡಿರುವುದು ಕಂಡುಬಂತು. ಕೆಲ ಸಮಯದವರೆಗೆ ಈ ಬಗ್ಗೆಯೇ ಪರಸ್ಪರರಲ್ಲಿ ಚರ್ಚೆ ನಡೆಯಿತು.