ಮಾನ್ವಿ: ಇಲ್ಲಿನ ಕರ್ನಾಟಕ ಸಭಾಂಗಣದಲ್ಲಿ ಹಾಲ್ನಲ್ಲಿ ಇತ್ತೀಚೆಗೆ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆ ವತಿಯಿಂದ ಗ್ರಾಮ ಪಂಚಾಯಿತಿ ಸದಸ್ಯರಿಗೆ ರಾಯಚೂರು ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಸಂಘಟನೆಯ ಜಿಲ್ಲಾ ಸಂಚಾಲಕ ಶಮೀಮುದ್ದೀನ್ ಹೈದರ್ಸಾಬ ಮಾತನಾಡಿ, ಹಣಕ್ಕಾಗಿ ಎಲ್ಲವನ್ನೂ ಮಾರಿಕೊಳ್ಳುವ ಇಂದಿನ ದಿನಗಳಲ್ಲಿ ನೈತಿಕ ಮೌಲ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕಾಗಿದೆ. ನೂತನ ಪಂಚಾಯಿತಿ ಸದಸ್ಯರು ಸಮಾಜದ ಎಲ್ಲಾ ವರ್ಗದ ಜನರಿಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ದೊರಕುವಂತೆ ಮಾಡಲು ಶ್ರಮಿಸಬೇಕು. ಸಿಕ್ಕಿರುವ ಅವಕಾಶವನ್ನು ಬಡವರ ಪರವಾಗಿ ದುಡಿಯಲು ಬಳಸಿಕೊಳ್ಳಬೇಕು ಎಂದರು.
ಜನಾಬ್ ಮಿರ್ಝಾ ಬೇಗ್, ಹುಸೇನ್ ಬಾಷ ಮಾತನಾಡಿ, ಸರ್ಕಾರದ ಸವಲತ್ತುಗಳು ಜನರಿಗೆ ತಲುಪಿಸಲು ಎಲ್ಲರೂ ಶ್ರಮಿಸಬೇಕು ಎಂದರು. ಶಿಕ್ಷಕ ಸಬ್ಜಲಿ ಪವಿತ್ರ ಕುರಾನ್ ಪ್ರವಚನ ಮಾಡಿದರು. ಜಮಾತೆ ಇಸ್ಲಾಮಿ ಹಿಂದ್ ಸ್ಥಳೀಯ ಘಟಕದ ಅಧ್ಯಕ್ಷ ಮೌಲಾನಾ ಅನ್ವರ್ ಪಾಷಾ ಉಮರಿ ಪ್ರಾಸ್ತಾವಿಕ ಭಾಷಣ ಮಾಡಿದರು. ಮೌಲಾಸಾಬ ಪರಾಪುರ ನಿರೂಪಿಸಿದರು. ದಾವೂದ್ ಸಿದ್ದಿಕಿ ಸಾಬ್ ವಂದಿಸಿದರು.