ಬೆಂಗಳೂರು: ಅರ್ಜಿದಾರರು ಮತ್ತು ಆಪಾದಿತರ ಸಹಕಾರ ಇದ್ದರೆ ಮಾತ್ರ ಶಾಸಕರ ವಿರುದ್ಧದ ದೂರಿನ ವಿಚಾರಣೆಯನ್ನು ಶೀಘ್ರ ಇತ್ಯರ್ಥಪಡಿಸಬಹುದು ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಶನಿವಾರ ಇಲ್ಲಿ ಹೇಳಿದರು.
ಬಿಜೆಪಿಯ ಪರಿಷತ್ ಸದಸ್ಯ ಅಶ್ವತ್ಥನಾರಾಯಣ ಅವರು ತಮ್ಮ ಪಕ್ಷದ ಆರು ಮಂದಿ ಶಾಸಕರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಯ ದೂರು ನೀಡಿದ್ದರು. ಅವರ ಸದಸ್ಯತ್ವ ರದ್ದು ಮಾಡಬೇಕು ಎಂದು ದೂರಿನಲ್ಲಿ ಆಗ್ರಹಪಡಿಸಿದ್ದರು.
ಈ ಸಂಬಂಧ ತಾವು ಕೊಟ್ಟ ನೋಟಿಸ್ಗೆ ಎಲ್ಲ ಶಾಸಕರೂ ಉತ್ತರ ನೀಡಿದ್ದಾರೆ. ಇವರ ಉತ್ತರಕ್ಕೆ ಅರ್ಜಿದಾರರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಆಪಾದನೆ ಎದುರಿಸುತ್ತಿದ್ದ ಶಿವರಾಜ್ ಸಜ್ಜನ್ ಮತ್ತು ಮೋಹನ್ ಲಿಂಬಿಕಾಯಿ ಅವರು ಈಗಾಗಲೇ ಪರಿಷತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಉಳಿದಂತೆ ಬಿ.ಜೆ.ಪುಟ್ಟಸ್ವಾಮಿ, ಭಾರತಿಶೆಟ್ಟಿ, ಮುಮ್ತಾಜ್ ಆಲಿ ಖಾನ್ ಮತ್ತು ಎಂ.ಡಿ.ಲಕ್ಷ್ಮೀನಾರಾಯಣ ಅವರ ವಿರುದ್ಧದ ಅರ್ಜಿ ಬಾಕಿ ಇದ್ದು, ಅರ್ಜಿದಾರರ ಅಭಿಪ್ರಾಯ ಪಡೆದ ನಂತರ ಪ್ರಕರಣವನ್ನು ಇತ್ಯರ್ಥಪಡಿಸಲಾಗುವುದು ಎಂದರು.