ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಸಂಪರ್ಕಕ್ಕೆ ಆಗ್ರಹಿಸಿ ಧರಣಿ ಆರಂಭ

Last Updated 27 ಸೆಪ್ಟೆಂಬರ್ 2011, 6:25 IST
ಅಕ್ಷರ ಗಾತ್ರ

ಹೊಸನಗರ: ತಾಲ್ಲೂಕಿನ ಮೂಡುಗೊಪ್ಪ ನಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶರಾವತಿ ಹಿನ್ನೀರಿನ 5 ಮಜರೆ ಹಳ್ಳಿಯ ಗ್ರಾಮಸ್ಥರು ರಸ್ತೆ ಸಂಪರ್ಕಕ್ಕಾಗಿ ಸೋಮವಾರದಿಂದ ಅನಿರ್ದಿಷ್ಟಕಾಲ ನಡುಗಡ್ಡೆಯಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಮಳೆಗಾಲದಲ್ಲಿ ಶರಾವತಿ ಹಿನ್ನೀರಿನ 5 ತಿಂಗಳು ಕಾಲ ಕೆರೆಮಠ, ಬಾಳೆಕೊಪ್ಪ, ಮಟದಜಡ್ಡು, ಕೋಟೆ ಕೆರೆ ಹಿಂದಿನ ಕೇರಿ, ಉಕ್ಕಡ ರಸ್ತೆ ಸಂಪರ್ಕ ಇಲ್ಲದ ಗ್ರಾಮಸ್ಥರು ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವ ತನಕ ಸೋಮವಾರದಿಂದ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ಕೇವಲ ರೂ 10ರಿಂದ 20 ಲಕ್ಷ ವೆಚ್ಚದಲ್ಲಿ ಸುಮಾರು 1.5 ಕಿ.ಮೀ ದೂರದವರೆಗೆ 2ರಿಂದ 10 ಅಡಿಯ ಎತ್ತರದ ದಂಡೆ ಹಾಕಿ ರಸ್ತೆ ಏರಿಸುವಂತೆ ಕಳೆದ 4 ದಶಕಗಳಿಂದ ಮಾಡಿದ ಮನವಿಗಳು ಸಂಪೂರ್ಣವಾಗಿ ವಿಫಲವಾದ ಕಾರಣ 5 ಮಜರೆ ಹಳ್ಳಿಯ ಗ್ರಾಮಸ್ಥರು ಮೂಡುಗೊಪ್ಪ ನಗರ ತಲುಪಲು ಕಾಲು ದಾರಿಯಲ್ಲಿ ಸುಮಾರು 10 ಕಿ.ಮೀ. ದೂರ ಸಂಚರಿಸುವುದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದೆ.

ಶಾಶ್ವತ ಸಂಪರ್ಕಕ್ಕೆ ಆಗ್ರಹ: ತಾ.ಪಂ. ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ ಹಾಗೂ ಗ್ರಾ.ಪಂ. ಅಧ್ಯಕ್ಷೆ ಶಾರದಮ್ಮ ಸ್ಥಳಕ್ಕೆ ಆಗಮಿಸಿ ನೀಡಿದ ಮತ್ತೊಂದು ಭರವಸೆಗೆ ಒಪ್ಪದ ಗ್ರಾಮಸ್ಥರು ತಮ್ಮಡನೆ ಪ್ರತಿಭಟನೆ ಭಾಗವಹಿಸುವಂತೆ ಕೋರಿದರು.

ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ಭೇಟಿ ನೀಡಿ ತಾತ್ಕಾಲಿಕವಾಗಿ ಬೋಟ್ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ನಿಗಮದಿಂದ ಶಾಶ್ವತ ರಸ್ತೆ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿದರು.

ಚುನಾವಣೆ ಬಹಿಷ್ಕಾರ: ರಸ್ತೆ ಸಂಪರ್ಕದ ತಮ್ಮ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ ಚುನಾವಣೆಯಲ್ಲಿ ಬಹಿಷ್ಕಾರದ ಎಚ್ಚರಿಕೆ ಹಾಕಲಾಗಿತ್ತು. ಆಗ ಸುದ್ದಿ ತಿಳಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿ ಮತ ಪಡೆದು ಸುಮ್ಮನಾದರು ಎಂಬುದು ಗ್ರಾಮಸ್ಥರ ಆರೋಪ.

ಜನಪ್ರತಿನಿಧಿಗಳ ಹಾಗೂ ಸ್ಥಳೀಯ ಅಧಿಕಾರಿಗಳ ಈಡೇರದ ಹುಸಿ ಭರವಸೆಗೆ ಬೇಸತ್ತ ಗ್ರಾಮಸ್ಥರು ತಮ್ಮ ಬೇಡಿಕೆ ಈಡೇರಿಸಲು ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಬರಬೇಕು. ಅಲ್ಲಿಯ ತನಕ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT