ಈರೋಡ್, (ತಮಿಳುನಾಡು), (ಪಿಟಿಐ): ಸುಧೀರ್ಘ ಕಾಲ ನೆನೆಗುದಿಗೆ ಬಿದ್ದಿದ್ದ ದಿವಂಗತ ವರನಟ ಡಾ. ರಾಜ್ಕುಮಾರ್ ಅಪಹರಣ ಪ್ರಕರಣ ಈರೋಡ್ ಜಿಲ್ಲೆಯ ಗೊಬಿಚೆಟ್ಟಿಪಾಳಯಂನ ತ್ವರಿತಗತಿ ನ್ಯಾಯಾಲಯದಲ್ಲಿ ಗುರುವಾರ ಆರಂಭವಾಯಿತು.
ರಾಜ್ಕುಮಾರ್ ಅವರು ತಮ್ಮ ಹುಟ್ಟೂರು ದೊಡ್ಡ ಗಾಜನೂರಿನ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ 2000ರ ಜುಲೈ 30ರಂದು ಕಾಡುಗಳ್ಳ ವೀರಪ್ಪನ್ ಮತ್ತು ಆತನ ಸಹಚರರು ಅವರನ್ನು ಅಪಹರಿಸಿದ್ದರು.
ರಾಜ್ ಅವರನ್ನು 108 ದಿನಗಳ ಬಳಿಕ 2000ರ ನವೆಂಬರ್ 15ರಂದು ವೀರಪ್ಪನ್ ಬಿಡುಗಡೆ ಮಾಡಿದ್ದ. ನಾಲ್ಕು ವರ್ಷಗಳ ನಂತರ ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆ ವೇಳೆ ವೀರಪ್ಪನ್ ಹತ್ಯೆಯಾಗಿದ್ದ. ಇತರ ಆರೋಪಿಗಳಾದ ಸೇತುಕುಳಿ ಗೋವಿಂದನ್ ಮತ್ತು ರಂಗಸ್ವಾಮಿ ಈಗಾಗಲೇ ಮೃತಪಟ್ಟಿದ್ದಾರೆ. ವಿಚಾರಣೆ ವೇಳೆ ವೀರಪ್ಪನ್ನ 10 ಸಹಚರರು ನ್ಯಾಯಾಲಯಕ್ಕೆ ಹಾಜರಾದರು.
ಸಾಕ್ಷಿಗಳ ಪರವಾಗಿ ರಾಜ್ಕುಮಾರ್ ಅಳಿಯ ಎಸ್. ಎ. ಗೋವಿಂದರಾಜ್, ಇನ್ನೊಬ್ಬ ಸಂಬಂಧಿಕ ನಾಗೇಶ ಮತ್ತು ಚಲನಚಿತ್ರ ಸಹಾಯಕ ನಿರ್ದೇಶಕ ನಾಗಪ್ಪ ಕೋರ್ಟ್ಗೆ ಹಾಜರಾದರು.