ಭುವನೇಶ್ವರ: ಒಡಿಶಾದ ಅಂಗುಲ್ ಜಿಲ್ಲೆಯ ತಲ್ಚರ್ ಕಲ್ಲಿದ್ದಲು ಪಟ್ಟಣ ಬಳಿಯ ಕನಿಹಾದಲ್ಲಿರುವ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮದ (ಎನ್ಟಿಪಿಸಿ) ೩,೦೦೦ ಮೆಗಾವಾಟ್ ಸಾಮರ್ಥ್ಯದ ಸ್ಥಾವರದಲ್ಲಿ ಉತ್ಪಾದನೆ ಸ್ಥಗಿತವಾಗಿದೆ. ಈ ದಿಢೀರ್ ಬೆಳವಣಿಗೆಯು ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳ ವಿದ್ಯುತ್ ಪೂರೈಕೆ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ.
ಎನ್ಟಿಪಿಸಿ ಸ್ಥಾವರಗಳಿಂದ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಒಡಿಶಾ ರಾಜ್ಯಗಳು ಅಂದಾಜು 500 ಮೆಗಾವಾಟ್ನಷ್ಟು ವಿದ್ಯುತ್ ಪಡೆಯುತ್ತಿವೆ.
ಸಮೀಪದ ಗಣಿಯಿಂದ ಕಲ್ಲಿದ್ದಲು ಸರಬರಾಜು ನಿಂತಿರುವುದರಿಂದ ಈ ಮುಖ್ಯ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಸರ್ಕಾರಿ ಸ್ವಾಮ್ಯದ ಭಾರತೀಯ ಕಲ್ಲಿದ್ದಲು ಸಂಸ್ಥೆಯ (ಸಿಐಎಲ್) ಅಂಗವಾದ ಮಹಾನಂದಿ ಕಲ್ಲಿದ್ದಲು ನಿಕ್ಷೇಪ ಘಟಕದಲ್ಲಿ (ಎಂಸಿಎಲ್) ಹಿಂಸಾಚಾರ ನಡೆದು, ಸುತ್ತಲಿನ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ ಆಗಿರುವುದರಿಂದ ಗಣಿಯನ್ನು ತಾತ್ಕಾಲಿಕ ಮುಚ್ಚಲಾಗಿದೆ.
ಕಾರ್ಮಿಕರ ಗುಂಪೊಂದು, ತಮ್ಮನ್ನು ಹೊಸ ಕಲ್ಲಿದ್ದಲು ಗುತ್ತಿಗೆದಾರರು ಕೆಲಸದಿಂದ ತೆಗೆದುಹಾಕಿರುವುದನ್ನು ಖಂಡಿಸಿ ಶುಕ್ರವಾರ ಹಿಂಸಾತ್ಮಕ ಪ್ರತಿಭಟನೆ ನಡೆಸಿತುರಾಜ್ಯದಲ್ಲಿ ವಿದ್ಯುತ್ ವ್ಯತ್ಯಯ?
ಈ ಸಂದರ್ಭದಲ್ಲಿ ಆಕ್ರೋಶಭರಿತ ಕಾರ್ಮಿಕರು ಎಂಸಿಎಲ್ನ ಸ್ಥಳೀಯ ಕಚೇರಿ ಧ್ವಂಸಗೊಳಿಸಿ, ೪೦ರಿಂದ ೫೦ ವಾಹನಗಳಿಗೆ ಬೆಂಕಿ ಹಚ್ಚಿದರು.
ಈ ಘಟನೆಯು ಪ್ರದೇಶದಲ್ಲಿ ಉದ್ರಿಕ್ತಪರಿಸ್ಥಿತಿಗೆ ಕಾರಣವಾಗಿದ್ದು, ಶನಿವಾರ ಸಂಜೆ ತಲ್ಚರ್ನ ಪಕ್ಷೇತರ ಶಾಸಕ ಬಿ.ಕೆ. ಪ್ರಧಾನ್ ಅವರ ಬಂಧನದಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಶಾಸಕರ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದು 14 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಅಂಗುಲ್ ಜಿಲ್ಲಾಡಳಿತವು ಉದ್ವಿಗ್ನ ತಲ್ಚರ್ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆಯಿಂದ ನಿಷೇಧಾಜ್ಞೆ ಜಾರಿಗೊಳಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಭಾರಿ ಪೊಲೀಸ್ ಬಂದೋಬಸ್್ತ ಏರ್ಪಡಿಸಿದೆ. ಈ ಬೆಳವಣಿಗೆಯಿಂದಾಗಿ ಗಣಿಗಾರಿಕೆ ಮತ್ತು ಕಲ್ಲಿದ್ದಲು ಸರಬರಾಜು ಸ್ಥಗಿತಗೊಂಡಿದೆ.
ಎನ್ಟಿಪಿಸಿ ಆಡಳಿತವು ಕಲ್ಲಿದ್ದಲು ಕೊರತೆಯಿಂದಾಗಿ ತಲಾ 500 ಮೆವಾ ಸಾಮರ್ಥ್ಯದ 6 ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಮೂರನ್ನು ಈಗಾಗಲೇ ಸ್ಥಗಿತಗೊಳಿಸಿದೆ. ಈ ಬೆಳವಣಿಗೆಯಿಂದ ಎನ್ಟಿಪಿಸಿಗೆ ಈಗಾಗಲೇ ₨ 50 ಕೋಟಿಗಳಿಗೂ ಹೆಚ್ಚಿನ ನಷ್ಟ ಉಂಟಾಗಿದೆ. ಎಂಸಿಎಲ್ಗೆ ₨ 21 ಕೋಟಿಗಳಿಗೂ ಅಧಿಕ ನಷ್ಟವಾಗಿದೆ. ಇದಲ್ಲದೆ, ಒಡಿಶಾ ಸರ್ಕಾರ ಕೂಡ ಕೋಟ್ಯಂತರ ರೂಪಾಯಿಗಳ ಆದಾಯ ತೆರಿಗೆಯನ್ನು ಕಳೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.