ರಾಯಚೂರು: ಎರಡು ವರ್ಷಗಳ ಹಿಂದೆ ಇದಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಿದ್ರೂ ಇಷ್ಟೊಂದು ಬಿಸಿಲಿನ ತಾಪ ಅನುಭವಿಸಿರಲಿಲ್ಲ. ಈ ವರ್ಷ ಇದೇನ್ರಿ ಇಷ್ಟೊಂದು ಬಿಸಿಲು ಎಂದು ನಗರದ ಜನತೆ ಪ್ರಶ್ನಿಸುವಂತಾಗಿದೆ. ಬಾಲಕಿಯೊಬ್ಬಳು ಶನಿವಾರ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬಿಸಿಲಿನ ತಾಪಕ್ಕೆ ಮೂರ್ಛೆ ತಪ್ಪಿ ಬಿದ್ದು ಗಾಯಗೊಂಡ ಘಟನೆ ನಡೆದಿದೆ.
ಗಾಯಗೊಂಡ ಬಾಲಕಿ ಸಂಪತ್ ಇನ್ನಾಣಿ ಎಂಬುವವರ ಪುತ್ರಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ ವೆಂಕಟೇಶ ತಿಳಿಸಿದ್ದಾರೆ. ಹಿಂದಿನ ವರ್ಷಗಳಿಗಿಂತ ಈ ವರ್ಷ ತಾಪಮಾನ, ಬಿಸಿ ಗಾಳಿ ಪ್ರಮಾಣ ಹೆಚ್ಚಾಗಿದ್ದು, ಇದರಿಂದ ಬಳಲಿಕೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಭಾನುವಾರ ರಾಯಚೂರಿನಲ್ಲಿ 44 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶನಿವಾರ ಇಲ್ಲಿ 43 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಹವಾಮಾನ ಇಲಾಖೆ ಮಾಹಿತಿಯನ್ವಯ ಎರಡು ವರ್ಷಗಳ ಹಿಂದೆ 45 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚು ತಾಪಮಾನ ದಾಖಲಾಗಿತ್ತು. ಆದರೆ, ಈ ವರ್ಷದ ರಣ ರಣ ಉರಿ ಬಿಸಿಲು ಕಂಡಿರಲಿಲ್ಲ.
ಮೂರು ದಿನಗಳಿಂದ ಬಿಸಿಲಿನ ತಾಪ ಹೆಚ್ಚಾಗಿದೆ ಎಂದು ಜನರು ಹೇಳುತ್ತಿದ್ದಾರೆ.
ಮುಂಜಾನೆ 7ರಿಂದ ಸೂರ್ಯ ಉರಿ ಬಿಸಿಲಿನೊಂದಿಗೆ ಉದಯಿಸಿ ಬರುತ್ತಿರುವುದು ಜನತೆಯನ್ನು ಹೈರಾಣಾಗಿಸಿದೆ. ಹತ್ತು ಗಂಟೆಗೆ ಭಾರಿ ಬಿಸಿಲು. ಮಧ್ಯಾಹ್ನ ರಸ್ತೆಯಲ್ಲಿ ಸಂಚರಿಸುವಂತೆಯೇ ಇಲ್ಲ.
ಜಿಲ್ಲಾ ಆರೋಗ್ಯಾಧಿಕಾರಿ ಸಲಹೆ: ಬಿಸಿಲಿನ ತಾಪ ಹೆಚ್ಚಾಗಿದೆ. ಸಾರ್ವಜನಿಕರು ಆರೋಗ್ಯದ ದೃಷ್ಟಿಯಿಂದ ಮಧ್ಯಾಹ್ನ 1ರಿಂದ ಸಂಜೆ 4 ಗಂಟೆಯವರೆಗೆ ಹೊರಗಡೆ ಸಂಚಾರ ಕಡಿಮೆ ಮಾಡುವುದು ಸೂಕ್ತ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ `ಪ್ರಜಾವಾಣಿ~ಗೆ ತಿಳಿಸಿದರು.
ಹೆಚ್ಚು ತಾಪಮಾನಕ್ಕೆ ಮಾಂಸಖಂಡಗಳು ಕರಗುತ್ತವೆ. ಇದರಿಂದ ಸ್ನಾಯು ಸೆಳೆತ ಬರುತ್ತದೆ. ಕೈ-ಕಾಲು ಹಿಡಿದುಕೊಂಡು ಚಿಕುನ್ಗುನ್ಯಾದಂಥ ಅನುಭವ ಆಗುತ್ತದೆ. ಆಯಾಸ ಹೆಚ್ಚಾಗಿ ಜ್ವರ, ತಲೆನೋವು ಬರುತ್ತದೆ ಎಂದರು.
ಸಾಮಾನ್ಯ ದಿನಗಳಲ್ಲಿ ಆರೋಗ್ಯಯುತ ವ್ಯಕ್ತಿ 5 ಲೀಟರ್ ನೀರು ಕುಡಿಯಬೇಕು. ಬಿಸಿಲು ಕಾಲದಲ್ಲಿ 10 ಲೀಟರ್ಗಿಂತ ಹೆಚ್ಚು ನೀರು ಕುಡಿಯಬೇಕು. ತರಹೇವಾರಿ ತಂಪು ಪಾನೀಯಕ್ಕಿಂತ `ಲಿಂಬು ಶರಬತ್~ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಬಿಸಿಲು ಕಾಲದಲ್ಲಿ ಬೆಳಿಗ್ಗೆ ಮತ್ತು ಸಂಜೆ ಸ್ನಾನ ಮಾಡುವುದು ಒಳ್ಳೆಯದು. ಸನ್ ಸ್ಟ್ರೋಕ್, ಸನ್ ಬರ್ನ್ನಿಂದ ರಕ್ಷಿಸಿಕೊಳ್ಳಲು ಸನ್ ಕ್ರೀಮ್, ಲೋಷನ್ ಬಳಸಬಹುದು ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.