ಬೆಂಗಳೂರು: ತನ್ನದೇ ಆದ ವಿಶಿಷ್ಟ ಕೆಂಪು ಬಣ್ಣದ ಮೂಲಕ ರಫ್ತಿಗೆ ಹೆಸರುವಾಸಿಯಾಗಿರುವ ಬ್ಯಾಡಗಿ ಮೆಣಸಿನಕಾಯಿಯ ಇಳುವರಿ ರೋಗದಿಂದ ಇತ್ತೀಚೆಗೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೋಗ ನಿರೋಧಕ ಶಕ್ತಿಯುಳ್ಳ ತಳಿಯನ್ನು ಅಭಿವೃದ್ಧಿಪಡಿಸಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ನಿರ್ಧರಿಸಿದೆ. ಇದರ ಸಂಶೋಧನೆ ಪ್ರಾರಂಭಿಕ ಹಂತದಲ್ಲಿದ್ದು, ಎರಡು ವರ್ಷದಲ್ಲಿ ತಳಿಯನ್ನು ಸಂಸ್ಥೆಯು ಪರಿಚಯಿಸಲಿದೆ.
ನಗರದ ಹೊರವಲಯದ ಹೆಸರಘಟ್ಟದ ಸಂಸ್ಥೆಯಲ್ಲಿ ಸುಧಾರಿತ ತರಕಾರಿ ತಳಿಗಳು ಹಾಗೂ ಆಧುನಿಕ ಬೇಸಾಯ ಪದ್ಧತಿಯನ್ನು ರೈತರಿಗೆ ಪರಿಚಯಿಸುವ ಉದ್ದೇಶದಿಂದ ಶುಕ್ರವಾರ ಹಮ್ಮಿಕೊಂಡಿದ್ದ `ಕ್ಷೇತ್ರೋತ್ಸವ~ದ ನಂತರ ಸಂಸ್ಥೆಯ ತರಕಾರಿ ವಿಭಾಗದ ಮುಖ್ಯಸ್ಥರೂ ಆಗಿರುವ ಪ್ರಧಾನ ವಿಜ್ಞಾನಿ ಡಾ.ಎ.ಟಿ. ಸದಾಶಿವ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ರಾಜ್ಯದಲ್ಲಿ ಸುಮಾರು ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಬ್ಯಾಡಗಿ ಮೆಣಸಿನಕಾಯಿ ಇಳುವರಿ ರೋಗದಿಂದ ಶೇ 60ರಿಂದ 70ರಷ್ಟು ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಮಲ್ಲೆ ರೋಗ, ಕಾಯಿ ಕೊಳೆಯುವ ರೋಗ ಹಾಗೂ ನುಸಿ ರೋಗವನ್ನು ತಡೆಯುವ ನಿರೋಧಕ ಶಕ್ತಿಯುಳ್ಳ ಹೊಸ ತಳಿ ಅಭಿವೃದ್ಧಿಪಡಿಸುವ ಸಂಶೋಧನೆ ಆರಂಭಿಸಿದೆ ಎಂದರು.
ಪ್ರಸ್ತುತ ಒಂದು ಹೆಕ್ಟೇರ್ ಪ್ರದೇಶದಲ್ಲಿ 1ರಿಂದ 1.5 ಟನ್ ಬ್ಯಾಡಗಿ ಮೆಣಸಿನಕಾಯಿ ಬೆಳೆಯಲಾಗುತ್ತಿದ್ದು, ರೋಗ ನಿರೋಧಕ ಶಕ್ತಿಯುಳ್ಳ ಹೊಸ ತಳಿಯಿಂದ ಹೆಕ್ಟೇರ್ಗೆ ನಾಲ್ಕು ಟನ್ಗಳಷ್ಟು ಇಳುವರಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.