ಹಿರಿಯೂರು: ಲಭ್ಯ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಖ್ಯಾತ ಸಾಹಿತಿ ಬಿ.ಎಲ್. ವೇಣು ಕರೆ ನೀಡಿದರು.
ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಹಿರಿಯ ವಿದ್ಯಾರ್ಥಿಗಳಿಗೆ ವಿದಾಯ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಡತನ, ಹಸಿವಿನ ಸಂಕಟವನ್ನು ನಾನು ಸಾಕಷ್ಟು ಅನುಭವಿಸಿದ್ದೇನೆ. ಚಪ್ಪಲಿ ಹಾಕಿದ್ದು, ಕೈಗಡಿಯಾರ ಕಟ್ಟಿದ್ದು ಉದ್ಯೋಗಕ್ಕೆ ಸೇರಿದ ಮೇಲೆ. ಸುಧಾ ಮತ್ತಿತರ ವಾರಪತ್ರಿಕೆಗಳಲ್ಲಿ ಹತ್ತಾರು ಕತೆಗಳು ಪ್ರಕಟವಾದವು. ಕೆ.ವಿ. ಜೈರಾಂ ಸೇರಿದಂತೆ ಹಲವು ನಿರ್ದೇಶಕರ ಪರಿಚಯ ಆಯಿತು. ಸಾಹಿತ್ಯ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಹೆಸರು, ಹಣ ಎರಡೂ ಬಂದವು ಎಂದು ಅವರು ವಿವರಿಸಿದರು.
ಕಾಲೇಜು ವಿದ್ಯಾರ್ಥಿಗಳು ಮೊದಲ ಬಾರಿಗೆ ಮತದಾನ ಮಾಡಲು ಹೊರಟಿದ್ದಾರೆ. ಮೌಲ್ಯಗಳನ್ನು ಉಳಿಸುವ ಕಾರ್ಯ ಯುವಕರಿಂದ ಆಗಬೇಕಿದೆ. ಇಲ್ಲವಾದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಲಿದೆ. ಹಣವಂತರ ಕೈಗೆ ಆಡಳಿತ ವ್ಯವಸ್ಥೆ ಸಿಕ್ಕಿ ನರಳಲಿದೆ. ಪ್ರಯುಕ್ತ ಯುವಕರು ಎಚ್ಚರಿಕೆಯಿಂದಿರಬೇಕು ಎಂದು ವೇಣು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಸಿ. ಶಿವಲಿಂಗಪ್ಪ ಮಾತನಾಡಿ, ವೇಣು ಅವರ ಬದುಕು-ಬರಹ ವಿದ್ಯಾರ್ಥಿಗಳಿಗೆ ಮಾದರಿ ಆಗಬೇಕು. ಕಾಲೇಜು ಶಿಕ್ಷಣ ಕೇವಲ ಅಂಕಗಳಿಕೆಯ, ಉದ್ಯೋಗ ದೊರಕಿಸುವ ಕೇಂದ್ರವಾಗದೆ, ಸಾಂಸ್ಕೃತಿಕ ಶ್ರೀಮಂತಿಕೆಯನ್ನು, ಸಾಹಿತ್ಯದ ಹುಚ್ಚು ಹೆಚ್ಚಿಸುವ ತಾಣಗಳಾಗಬೇಕು. ಕ್ರೀಡೆ- ನೃತ್ಯ- ಸಂಗೀತ-ಕಲೆ ಮತ್ತಿತರ ವಿಷಯಗಳಲ್ಲಿ ಗಳಿಸಿರುವ ಪ್ರತಿಭೆಯ ಪ್ರದರ್ಶನದ ವೇದಿಕೆಯಾಗಬೇಕು ಎಂದು ತಿಳಿಸಿದರು.
ಪ್ರೊ.ಗುಜ್ಜಾರಪ್ಪ, ಪ್ರೊ.ರಾಮ ಚಂದ್ರಪ್ಪ, ಪ್ರೊ.ರಾಮಕೃಷ್ಣಪ್ಪ,ವೈ. ತಿಪ್ಪೇಸ್ವಾಮಿ,ಡಿ. ಧರಣೇಂದ್ರಯ್ಯ, ಎಚ್.ಆರ್. ರಂಗಲಕ್ಷ್ಮಮ್ಮ, ಕೀರ್ತಿಕುಮಾರ್, ಗಣೇಶಯ್ಯ, ಜಿ. ರಾಜಶೇಖರಯ್ಯ, ದೊಡ್ಡಬಸಪ್ಪ, ಎಚ್. ತಿಪ್ಪೇಸ್ವಾಮಿ, ರಾಘವೇಂದ್ರ, ತಿಮ್ಮೇಗೌಡ, ಟಿ. ಬಸವರಾಜ್, ಎಸ್.ಜಿ. ರಂಗಸ್ವಾಮಿ ಸಕ್ಕರ ಹಾಜರಿದ್ದರು.
ಬಿಎ, ಬಿಕಾಂ ಮತ್ತು ಬಿಬಿಎಂ ವಿಭಾಗದಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ನಾಲ್ವರು ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.