ನವದೆಹಲಿ (ಪಿಟಿಐ): ಭ್ರಷ್ಟಾಚಾರ ನಿಗ್ರಹ ಉದ್ದೇಶದ, ಬಹುನಿರೀಕ್ಷಿತ ಲೋಕಪಾಲ ಮಸೂದೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಬುಧವಾರ ಅಂಕಿತ ಹಾಕಿದ್ದಾರೆ.
ಪ್ರಧಾನ ಮಂತ್ರಿಗೆ ಕೆಲ ರಕ್ಷಣೆ ಒದಗಿಸುವ ಜತೆ ಅವರ ಕಚೇರಿಯನ್ನೂ ಮಸೂದೆ ವ್ಯಾಪ್ತಿಗೆ ಒಳಪಡಿದೆ.
2013ರ ಡಿ.17ರಂದು ಕೆಲ ತಿದ್ದುಪಡಿಗಳನ್ನು ಒಳಗೊಂಡ ಮಸೂದೆಗೆ ರಾಜ್ಯಸಭೆ ಸಮ್ಮತಿ ನೀಡಿದ್ದು ಮರುದಿನವೇ ಲೋಕ ಸಭೆಯೂ ಇದಕ್ಕೆ ಅಂಗೀಕಾರ ನೀಡಿತ್ತು. ಮಂಗಳವಾರವಷ್ಟೆ ಲೋಕಸಭಾ ಸಚಿವಾಲಯ ಈ ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಿತ್ತು. ಮಸೂದೆ ಅನುಷ್ಠಾನಕ್ಕೆ ಬಂದ ಒಂದು ವರ್ಷದ ಅವಧಿಯೊಳಗೆ ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಲೋಕಾಯುಕ್ತ ವ್ಯವಸ್ಥೆ ರಚನೆ ಯಾಗಬೇಕಿದೆ.