ತರೀಕೆರೆ: ವಕ್ಫ್ ಮಂಡಲಿಯ ಮೂಲಕ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ರೂ. 200 ಕೋಟಿ ಹಣವನ್ನು ರಾಜ್ಯ ಸರ್ಕಾರ ನೀಡಿದೆ ಎಂದು ಶಾಸಕ ಡಿ.ಎಸ್.ಸುರೇಶ್ ತಿಳಿಸಿದರು.
ಪಟ್ಟಣದ ಹಳೆಸಂತೆ ಮೈದಾನದಲ್ಲಿರುವ ಅಂಚೆ ಕಚೇರಿಯ ಮುಂಭಾಗದಲ್ಲಿರುವ ಅತ್ಯಂತ ಬೆಲೆಬಾಳುವ ಪುರಸಭಾ ನಿವೇಶನದಲ್ಲಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಸಮಯದಲ್ಲಿ ಕಟ್ಟಡ ಕಳೆದುಕೊಂಡಿದ್ದ ಸರ್ಕಾರಿ ಉರ್ದುಶಾಲೆಯ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಪುರಸಭೆಯ ನೀಡಿದ ನಿವೇಶನದಲ್ಲಿ ಸರ್ವಶಿಕ್ಷ ಅಭಿಯಾನದಡಿ ಎರಡು ಕೊಠಡಿಗಳನ್ನು ನಿರ್ಮಿಸಲು ಹಣ ಬಿಡುಗಡೆ ಮಾಡಲಾಗಿದೆ. ತಾಲ್ಲೂಕಿನ ಅಜ್ಜಂಪುರ ಉರ್ದು ಪ್ರೌಢಶಾಲೆಯ ನೂತನ ಕಟ್ಟಡಕ್ಕೆ ರೂ 25 ಲಕ್ಷಹಣ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್.ಪರಮೇಶ್ವರಪ್ಪ, ಸಮಾಜದ ಪ್ರತಿಯೊಬ್ಬ ಮಕ್ಕಳಿಗೂ ಶಿಕ್ಷಣ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಸರ್ಕಾರಿಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸುತ್ತಿದ್ದು, ಪಟ್ಟಣದ ಕೋಡಿಕ್ಯಾಂಪಿನ ಉರ್ದುಶಾಲೆಗೆ ಮೂರು ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲು ಹಣ ಬಿಡುಗಡೆ ಮಾಡಿದೆ ಎಂದರು.
ಪುರಸಭಾ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಉಮ್ಮರ್ ಫಾರೂಕ್ ಮಾತನಾಡಿ, ಹೆದ್ದಾರಿ ವಿಸ್ತರಣೆ ಸಂದರ್ಭದಲ್ಲಿ ಕಟ್ಟಡ ಕಳೆದುಕೊಂಡಿದ್ದ ಇಲ್ಲಿನ ಉರ್ದು ಶಾಲೆಯ ನೂತನ ಕಟ್ಟಡಕ್ಕೆ ಸ್ಥಳಾವಕಾಶ ನೀಡಲು ಸಹಕರಿಸಿದ ಪುರಸಭೆಯ ಎಲ್ಲಾ ಸದಸ್ಯರಿಗೂ ಮತ್ತು ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿದ ಶಾಸಕ ಡಿ.ಎಸ್.ಸುರೇಶ್ ಅವರಿಗೆ ಅಭಿನಂದನೆ ಸಲ್ಲಿಸಿ ನೂತನ ಕಟ್ಟಡದ ಸುತ್ತ ತಡೆಗೋಡೆ ನಿರ್ಮಿಸಲು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಘನಿ ಅನ್ವರ್, ಪುರಸಭಾಧ್ಯಕ್ಷೆ ಹೇಮಲತಾ, ಉಪಾಧ್ಯಕ್ಷೆ ಪಾರ್ವತಮ್ಮ ನಾಗರಾಜ್, ಸದಸ್ಯರಾದ ಜಯಮ್ಮ, ಟಿ.ನಾಗರಾಜ್, ಟಿ.ಎಚ್.ಸುರೇಶ್, ಎಂ.ನರೇಂದ್ರ, ಟಿ.ಕೆ.ಪ್ರಕಾಶ್, ಮಹಮ್ಮದ್ಜಿಯಾವುಲ್ಲಾ, ಮಿಲ್ಟ್ರಿ ಶ್ರೀನಿವಾಸ್, ಮುಖ್ಯಾಧಿಕಾರಿ ಕೆ.ಎಂ.ಸತ್ಯನಾರಾಯಣ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶಾಂತರಾಜ್, ತಾಲ್ಲೂಕು ಮುಸ್ಲಿಂ ವೆಲ್ಫೇರ್ ಕಮಿಟಿ ಅಧ್ಯಕ್ಷ ಅಮ್ಜದ್ಪಾಶ ಮತ್ತು ಮುಸ್ಲಿಂ ಮುಖಂಡರು ಇದ್ದರು.
ಬೋಧನಾ ಉಪಕರಣ ಮೇಳ
ಪ್ರಥಮ ಸ್ಥಾನ
ತರೀಕೆರೆ:ತಾಲ್ಲೂ ಕಿನ ರಂಗೇನಹಳ್ಳಿ ಯ ಸರ್ಕಾರಿ ಮಾದರಿ ಶಾಲೆ ಯ ಸಹ ಶಿಕ್ಷಕ ಸಿ.ಶಿವಾನಂದ ಇವರು ಇತ್ತೀಚೆಗೆ ಚಿಕ್ಕಮಗಳೂರಿನ ಡಯಟ್ನಲ್ಲಿ ನಡೆದ ಬೋಧನ ಉಪಕರಣ ತಯಾರಿಕೆ ಮೇಳದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.