ನೆಲಮಂಗಲ: `ಸುಧಾರಿತ ಆಧುನಿಕ ಕೃಷಿಯ ಯಶಸ್ಸು, ವಿದ್ಯಾವಂತ ಪರಿಶ್ರಮದ ಯುವಜನಾಂಗವನ್ನು ಅವಲಂಬಿಸಿದೆ. ವಿಶೇಷವಾಗಿ ಮಹಿಳೆಯರು ಆರ್ಥಿಕ ಸ್ವಾವಲಂಬನೆಗಾಗಿ ಆಧುನಿಕ ಕೃಷಿ ಕೈಗೊಳ್ಳುವುದರ ಜತೆಗೆ ಹೈನುಗಾರಿಕೆ, ಹೊಲಿಗೆ, ತೋಟಗಾರಿಕೆಯನ್ನು ಪ್ರವೃತ್ತಿಯನ್ನಾಗಿಸಿಕೊಳ್ಳಬೇಕು' ಎಂದು ಕೃಷಿ ಇಲಾಖೆಯ ಆಯುಕ್ತ ಡಾ.ವಿ.ಚಂದ್ರಶೇಖರ್ ಸಲಹೆ ನೀಡಿದರು.
ಸ್ಥಳೀಯ ವಿಶ್ವಶಾಂತಿ ಆಶ್ರಮ ಟ್ರಸ್ಟ್ ವತಿಯಿಂದ ಈಚೆಗೆ ಏರ್ಪಡಿಸಿದ್ದ ವಿಶ್ವರೂಪ ವಿಜಯ ವಿಠ್ಠಲನಿಗೆ ಕುಂಭಾಭಿಷೇಕ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗ ಮಟ್ಟದ ಬಾಲಕಿಯರ ವ್ಯಕ್ತಿತ್ವ ವಿಕಸನ ಶಿಬಿರದ ಚಿಂತನಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೋಕಾಯುಕ್ತ ಡಿವೈಎಸ್ಪಿ ಡಿ.ಪಾಲಾಕ್ಷಯ್ಯ ಗೋಷ್ಠಿ ಉದ್ಘಾಟಿಸಿ, `ವ್ಯಕ್ತಿತ್ವ ನಿರ್ಮಾಣಕ್ಕೆ ಸಾಂಸ್ಕೃತಿಕ ಪ್ರತಿಭೆಗಳು ಪೂರಕ. ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳಬೇಕು' ಎಂದರು.
ಕೇಂದ್ರ ಸರ್ಕಾರದ ಸಹಾಯಕ ಕಾರ್ಯಕ್ರಮ ಸಲಹೆಗಾರ ಕೆ.ವಿ.ಖಾದ್ರಿ ನರಸಿಂಹಯ್ಯ, ಸಾಹಿತಿ ವೀರಭದ್ರಪ್ಪ, ಪ್ರಾಂಶುಪಾಲ ಬಿ.ಎನ್.ರಮೇಶ್ ಉಪಸ್ಥಿತರಿದ್ದರು.