ತುಮಕೂರು: ವಿಶ್ವವಿದ್ಯಾಲಯಗಳು ಜ್ಞಾನ ಕೇಂದ್ರಗಳಾಗುವ ಬದಲು ಜಾತಿ ಕೇಂದ್ರಗಳಾಗುತ್ತಿವೆ. ತುಮಕೂರು ವಿ.ವಿ. ನಿರ್ಗಮಿತ ಕುಲಪತಿ ಎಸ್.ಸಿ.ಶರ್ಮಾ ಅವಧಿಯಲ್ಲಿ ನಡೆದಿರುವ ಅವ್ಯವಹಾರಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಪ್ರೊ.ಕಾಳೇಗೌಡ ನಾಗವಾರ ಒತ್ತಾಯಿಸಿದರು.
ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಕೂಡು ಜನವೇದಿಕೆ ಭಾನುವಾರ ಆಯೋಜಿಸಿದ್ದ ‘ಹೊರಬೀಡು’ ಕೃತಿ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶರ್ಮಾ ಅವರಂತಹ ಲಜ್ಜೆಗೇಡಿ ಕುಲಪತಿಗಳು ವಿ.ವಿ.ಗಳ ಮರ್ಯಾದೆ ಕಳೆಯುತ್ತಿದ್ದಾರೆ ಎಂದು ಟೀಕಿಸಿದರು.
ಕುವೆಂಪು, ಜಿಎಸ್ಎಸ್ ವಿದ್ಯಾರ್ಥಿಯಾಗಿ, ಬಸವಣ್ಣನವರ ವಚನಗಳನ್ನು ಅಧ್ಯಯನ ಮಾಡಿರುವ ಡಾ. ಚಿದಾನಂದಮೂರ್ತಿ ಸಹ ಕೋಮುವಾದಿ ರೀತಿ ಮಾತನಾಡುತ್ತಿದ್ದಾರೆ. ಕೋಮುವಾದಿಗಳ ರೀತಿ ಜಾತಿಯೇ ದೊಡ್ಡದು ಎನ್ನುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಮನುಷ್ಯ ತನ್ನ ಅವಶ್ಯಕತೆಗಳಿಗೆ ತಕ್ಕಂತೆ ದೇವರನ್ನು ಸೃಷ್ಟಿಸಿಕೊಂಡಿದ್ದಾನೆ. ಭಾರತದಲ್ಲಿನ ಬುದ್ಧನ ಮೂರ್ತಿ, ಚೀನಾದಲ್ಲಿನ ಬುದ್ಧನ ಮೂರ್ತಿಗೆ ವೈರುಧ್ಯವಿದ್ದರೂ ಜನರು ಸತ್ಯವನ್ನು ಒಪ್ಪುವುದಿಲ್ಲ. ಮೊದಲಿನಿಂದ ದೇವರ ಬಗ್ಗೆ ಕಲ್ಪಿತ ಕತೆಗಳನ್ನು ಸತ್ಯವೆಂದು ಜನರನ್ನು ನಂಬಿಸಿದ್ದಾರೆ. ಅರಮನೆ, ಗುರುಮನೆ ಜನರ ಶತ್ರುಗಳು ಎಂದರು.
ತುಮಕೂರು ವಿ.ವಿ. ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ನಿತ್ಯಾನಂದ ಬಿ. ಶೆಟ್ಟಿ ಮಾತನಾಡಿ, ಪ್ರಕೃತಿಯಲ್ಲಿನ ಒಂದೇ ವಸ್ತು ಹಲವು ರೀತಿ ಕಾಣಿಸಿದರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಗೋವು ಹಲವರಿಗೆ ಭೋಜ್ಯ, ಕೆಲವರಿಗೆ ವರ್ಜ್ಯ. ಹಲವರಿಗೆ ಪೂಜ್ಯ. ಗೋವನ್ನು ಇಂದು ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ರೂಪವಾಗಿ ಬಿಂಬಿಸಲಾಗುತ್ತಿದೆ ಎಂದರು.
ಫ್ರೆಂಚ್ ಸಮಾಜ ಶಾಸ್ತ್ರಜ್ಞ ಲೂಯಿದೊನೊ ಭಾರತ ಸಾಮಾಜಿಕ, ಆರ್ಥಿಕ ವ್ಯವಸ್ಥೆ ನಿಂತಿರುವುದು ಗೋವಿನ ಮೇಲೆ ಎಂದು ಹೇಳಿದ್ದಾನೆ. ಪೂಜ್ಯ ಭಾವನೆಯುಳ್ಳವರು ಆಹಾರ ತತ್ವವನ್ನು ಅಳವಡಿಸಲು ಕಲ್ಪಿತ ರೂಪಕಗಳನ್ನು ಸೃಷ್ಟಿಸುವ ಮೂಲಕ ಸಾರ್ವಜನಿಕ ಸಮ್ಮತಿಯನ್ನು ನಿರೂಪಿಸಿದರು. ನಾಗರಿಕ ಸಮಾಜ ಬದಲಾಗುತ್ತಿದ್ದರು ಜಾತಿಯ ಅಂಧಶ್ರದ್ಧೆ ಕಡಿಮೆಯಾಗಿಲ್ಲ ಎಂದು ವಿಷಾದಿಸಿದರು.
ಪ್ರೊ.ಜಿ.ಎಂ.ಶ್ರೀನಿವಾಸಯ್ಯ, ಡಾ.ರವಿಕುಮಾರ್ ನೀಹ, ಮೇ.ನ.ತರಂಗಿಣಿ, ಗುರುಪ್ರಸಾದ್ ಕಂಟಲಗೆರೆ, ವಿಜಯಾ ಮೋಹನ್, ಡಾ.ಜಿ.ಹನುಮಂತರಾಯ, ಎನ್.ನಾಗಪ್ಪ, ಬಂದಕುಂಟೆ ನಾಗರಾಜಯ್ಯ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.