ವಿರಾಜಪೇಟೆ: ವಿರಾಜಪೇಟೆಯ ವಿವಿಧೆಡೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶನ ವಿಸರ್ಜನೋತ್ಸವವು ಭಾನುವಾರ ರಾತ್ರಿ 17 ಮಂಟಪಗಳ ಸಾಮೂಹಿಕ ಮೆರವಣಿಗೆಯೊಂದಿಗೆ ಶಾಂತಿಯುತವಾಗಿ ವೈಭವಪೂರ್ಣವಾಗಿ ಜರುಗಿತು.
ಶನಿವಾರ ರಾತ್ರಿಯಿಂದಲೇ ಹಬ್ಬದ ವಾತಾವರಣವನ್ನು ಮೂಡಿಸಿದ್ದ ಪಟ್ಟಣದಲ್ಲಿ ವಿಸರ್ಜನೋತ್ಸವದ ಅಂಗವಾಗಿ ಗೌರಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ ಎಲ್ಲಾ ಕಡೆಗಳಲ್ಲೂ ಭಕ್ತಾದಿಗಳು ಕಿಕ್ಕಿರಿದು ಸೇರಿದ್ದರು. ಎಲ್ಲ ಸ್ಥಳಗಳಲ್ಲು ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ವಿರಾಜಪೇಟೆಯ ಗಣಪತಿ ದೇವಾಲಯದ ಗಣಪತಿ ಸೇವಾ ಟ್ರಸ್ಟ್ ವತಿಯಿಂದ ರಾತ್ರಿ 11ಗಂಟೆಗೆ ಸಾಮೂಹಿಕ ಮೆರವಣಿಗೆಗೆ ಚಾಲನೆ ನೀಡಲಾಯತು. ವಿದ್ಯುತ್ ಅಲಂಕೃತ ಮಂಟಪದಲ್ಲಿ ರಾತ್ರಿ ಗಣೇಶನ ಮೂರ್ತಿಯನ್ನು ಸಾಂಪ್ರದಾಯಿಕವಾಗಿ ಕೂರಿಸುತ್ತಿದ್ದಂತೆ ಭಕ್ತರು ಈಡುಗಾಯಿಯ ಮಳೆಯನ್ನೇ ಸುರಿಸಿದರು.
ರಸ್ತೆಯ ಇಕ್ಕೆಲಗಳಲ್ಲಿ ಜನಸ್ತೋಮವೇ ನೆರೆದಿದ್ದರಿಂದ ಜನರನ್ನು ನಿಯಂತ್ರಿಸುವುದೇ ಪೊಲೀಸರಿಗೆ ಕಷ್ಟ ಸಾಧ್ಯವಾಗಿತ್ತು. ಮೆರವಣಿಗೆ ಪ್ರಾರಂಭದ ಮೊದಲು ರಾತ್ರಿ 10ಗಂಟೆಗೆ ದೇವಾಲಯದ ಗಡಿಯಾರ ಕಂಬದ ಬಳಿ ನಡೆದ ಸಿಡಿಮದ್ದು ಪ್ರದರ್ಶನ ಜನರನ್ನು ರಂಜಿಸಿತು.
ಗಣಪತಿ ದೇವಾಲಯದ ಮಂಟಪ ಮೆರವಣಿಗೆಯಲ್ಲಿ ಸಾಗಿ ರಾತ್ರಿ 12:30ಕ್ಕೆ ಬಸವೇಶ್ವರ ದೇವಾಲಯವನ್ನು ತಲುಪುತ್ತಿದ್ದಂತೆ ಇತರ ಎಲ್ಲ ವಿದ್ಯುತ್ ಅಲಂಕೃತ ಮಂಟಪಗಳು ಸರದಿ ಪ್ರಕಾರ ಹಿಂಭಾಲಿಸಿದವು.
ಮಂಟಪಗಳಿಗೆ ದಾರಿಯುದ್ದಕ್ಕೂ ಭಕ್ತಾದಿಗಳು ಪೂಜೆ ಸಲ್ಲಿಸಿದರು. ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಗೌರಿಕೆರೆಗೆ ಸೇರಿ 17ಮಂಟಪಗಳ ಗೌರಿ ಗಣೇಶನ ಮೂರ್ತಿಗಳ ವಿಸರ್ಜನೆ ನಡೆಯಿತು.
ಮೆರವಣಿಗೆಯಲ್ಲಿ ಸಂಚಾರಿ ವಾದ್ಯಗೋಷ್ಠಿ, ನಾಸಿಕ್ ಬ್ಯಾಂಡ್, ಮೈಸೂರು ಬ್ಯಾಂಡ್, ಕೇರಳದ ಪೂಕೋಡ್ ಬ್ಯಾಂಡ್, ಚಲನ ವಲನದ ಹುಲಿ ಮತ್ತಿತರ ಮನರಂಜನೆ ತಂಡಗಳು ಪಾಲ್ಗೊಂಡಿದ್ದವು. 17 ವಿದ್ಯುತ್ ಅಲಂಕೃಂತ ಮಂಟಪಗಳು ರಾತ್ರಿ ಪಟ್ಟಣದಲ್ಲಿ ಕತ್ತಲನ್ನು ನಾಚಿಸುವಂತೆ ಮಾಡಿದವು.