ಚನ್ನಪಟ್ಟಣ: ಮಾನವೀಯತೆ ಯಿಂದ ಬದುಕು ಸಾಗಿಸಲು ವ್ಯಾಪಾರ ನಡೆಸಲು ಅವಕಾಶ ಕೊಡಿ ಎಂದು ಫುಟ್ಪಾತ್ ವ್ಯಾಪಾರಿಗಳು ದಲಿತ ಸಂಘರ್ಷ ಸಮಿತಿ ಮೂಲಕ ಇಲ್ಲಿನ ನಗರಸಭೆ ಅಧ್ಯಕ್ಷೆ ರೇಷ್ಮಾಭಾನು ಮತ್ತು ಆಯುಕ್ತ ಚಂದ್ರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ನಗರಸಭಾ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಫುಟ್ಪಾತ್ ವ್ಯಾಪಾರಿಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ನಾವು ವ್ಯಾಪಾರ ಮಾಡುತ್ತೇವೆ, ಬೇರೆ ವ್ಯಾಪಾರ ನಮಗೆ ಗೊತ್ತಿಲ್ಲ ಅವಕಾಶಕೊಡಿ ಎಂದು ಭಿನ್ನವಿಸಕೊಂಡರು.
ಸಂದರ್ಭದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಗರಸಭೆ ಕಛೇರಿ ಮುಂದೆ 100ಕ್ಕೂ ಹೆಚ್ಚು ಫುಟ್ಪಾತ್ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು. ದಲಿತ ಸಂಘರ್ಷ ಸಮಿತಿ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ರೇಷ್ಮಾಭಾನು, ಎಂ.ಜಿ. ರಸ್ತೆಯಲ್ಲಿರುವ ಸರ್ಕಾರಿ ಬಾಲಕರ ಕಾಲೇಜು, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಬರುವ ಸಾರ್ವಜನಿಕರಿಗೆ ಮತ್ತು ನಗರದ ನಾಗರಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಫುಟ್ಪಾತ್ ತೆರವುಗೊಳಿಸಿದ್ದೇವೆ ಮುಂದಿನ ನಗರಸಭಾ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಆಯುಕ್ತ ಚಂದ್ರಪ್ಪ ಮಾತನಾಡಿ, ನಗರದ ನಾಗರಿಕರಿಗೆ ಮೂಲಭೂತ ಸೌಕರ್ಯಗಳು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ದಾರಿ ಬದಿತೆರ ವುಗೊಳಿಸಿದ್ದೇವೆ ಸಹಕರಿಸಿ ಎಂದು ವ್ಯಾಪಾರಿಗಳಲ್ಲಿ ಮನವಿ ಮಾಡಿದರು.