ಕೊಚ್ಚಿ (ಐಎಎನ್ಎಸ್): ಶಬರಿಮಲೆಯ ವಿವಾದಾತ್ಮಕ `ದೇವಪ್ರಶ್ನೆ~ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿದ ಆರೋಪ ಪಟ್ಟಿಯನ್ನು ಶುಕ್ರವಾರ ಕೇರಳ ಹೈಕೋರ್ಟ್ ರದ್ದುಗೊಳಿಸಿದೆ.
`ಇದೊಂದು ಮುಗಿದ ಅಧ್ಯಾಯ~ ಎಂದಿರುವ ಕೋರ್ಟ್, `ಆರೋಪಿಗಳ ವಿರುದ್ಧ ಹೊರಿಸಲಾದ ಆರೋಪವು ಕಾನೂನು ಬದ್ಧವಾಗಿಲ್ಲ~ ಎಂದಿದೆ.
ಹೆಸರಾಂತ ಜ್ಯೋತಿಷಿ ಪಿ. ಉಣ್ಣಿಕೃಷ್ಣನ್ ಪಣಿಕ್ಕರ್ ಅವರನ್ನೊಳಗೊಂಡ ತಂಡವು ಶಬರಿಮಲೆ ದೇವಸ್ಥಾನದಲ್ಲಿ 2006ರ ಜೂನ್ನಲ್ಲಿ ನಾಲ್ಕು ದಿನಗಳ ವರೆಗೆ `ದೇವಪ್ರಶ್ನೆ~ ಕೇಳಿ, ದೇವಸ್ಥಾನದ ಗರ್ಭಗುಡಿಯೊಳಗೆ ಮಹಿಳೆಯೊಬ್ಬರು ಪ್ರವೇಶಿಸಿದ್ದರು ಎಂದು ಹೇಳಿತ್ತು.
`ರಜಸ್ವಲೆ~ಯಾಗುವ ಮಹಿಳೆಯರು ಈ ದೇವಸ್ಥಾನ ಪ್ರವೇಶಿಸುವುದು ನಿಷಿದ್ಧವಾಗಿದೆ.
`ದೇವಪ್ರಶ್ನೆ~ ಬಳಿಕ, ಕನ್ನಡದ ನಟಿ ಜಯಮಾಲಾ 1987ರಲ್ಲಿ ತಾವು ಈ ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶಿಸಿದ್ದಾಗಿ ಹೇಳಿಕೊಂಡಿದ್ದರು.
`ಇದು ಪಣಿಕ್ಕರ್ ಅವರಿಗೆ ಹೆಸರು ಹಾಗೂ ಕೀರ್ತಿ ತಂದುಕೊಡಲು ಮಾಡಿದ ಪ್ರಯತ್ನ~ ಎಂದು ತನಿಖೆಯಿಂದ ಗೊತ್ತಾಗಿತ್ತು.
ಈ ರೀತಿ ಸಂಚು ರೂಪಿಸಿದ ಹಾಗೂ ರಾಜ್ಯದ ಜನರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ ಆರೋಪದ ಮೇಲೆ ಪೊಲೀಸರು ಪಣಿಕ್ಕರ್, ಅವರ ಸಹಾಯಕ ರಘುಪತಿ ಹಾಗೂ ನಟಿ ಜಯಮಾಲಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ವಜಾಗೊಳಿಸುವಂತೆ ಈ ಮೂವರು ಕೇರಳ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು.