ಹೊಸಪೇಟೆ: `ಶಿಕ್ಷಣ ಕ್ಷೇತ್ರ ನಿರಂತರ ಚಲನಶೀಲವಾಗಬೇಕು. ಅಂತೆಯೇ, ಶೈಕ್ಷಣಿಕ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸುವ ಪ್ರಯತ್ನ ಅಗತ್ಯವಾಗಿದೆ' ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಲ್.ಡಿ. ಜೋಶಿ ಹೇಳಿದರು.
ನಗರದ ಚಿತ್ತವಾಡಗಿ ವಿನೋಬಾ ಭಾವೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ನಲಿ-ಕಲಿ ತಾಲ್ಲೂಕು ಮಟ್ಟದ ಸಮಾವೇಶ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರವು ಕಳೆದ 10 ವರ್ಷಗಳಿಂದ ಶೈಕ್ಷಣಿಕ ಗುಣಮಟ್ಟ ಕಾಪಾಡಲು ಅನೇಕ ಕಾರ್ಯ ಯೋಜನೆಗಳನ್ನು ಜಾರಿ ಮಾಡಿದ್ದು, ಶಿಕ್ಷಣದಿಂದ ಯಾವ ಮಗುವೂ ಹೊರಗುಳಿಯಬಾರದು ಎಂದರು.
ಸರ್ವ ಶಿಕ್ಷಣ ಅಭಿಯಾನ, ಮರಳಿ ಬಾ ಶಾಲೆಗೆ, ಶಾಲಾ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ, ಚಿಣ್ಣರ ಅಂಗಳ ಸೇರಿದಂತೆ ಅನೇಕ ಕಾರ್ಯಕ್ರಮಗಳ ಮೂಲಕ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಮುಂದಾಗಿದೆ ಎಂದರು. ಶಿಕ್ಷಕರು ಪ್ರಾಮಾಣಿಕ ಪ್ರಯತ್ನದಿಂದ ಮಕ್ಕಳ ಬೌದ್ಧಿಕ ಸಾಮರ್ಥ್ಯಕ್ಕೆ ತಕ್ಕಂತೆ ಪಾಠ ಮಾಡುವುದರ ಜೊತೆಗೆ ಮಕ್ಕಳ ಮನಸ್ಸು ಗೆಲ್ಲುವ ಕಾರ್ಯ ನಡೆಯಬೇಕಾಗಿದೆ ಎಂದು ಹೇಳಿದರು.
ಶಿಕ್ಷಣ ಇಲಾಖೆಯ ಶರಣಪ್ಪ ವಟಗಲ್ ಮಾತನಾಡಿ, ಸರ್ಕಾರವು ಮಕ್ಕಳ ಬುದ್ದಿಶಕ್ತಿಯನ್ನು ಹೆಚ್ಚಿಸಲು ನಲಿ-ಕಲಿ ಕಾರ್ಯಕ್ರಮ ರೂಪಿಸಿದ್ದು, ಈ ಕಾರ್ಯಕ್ರಮದ ಅಡಿ ಮಕ್ಕಳ ತಿಳುವಳಿಕೆಯು ಮೇಲೆ ಶಿಕ್ಷಣ ನೀಡುವುದರ ಜೊತೆಗೆ ಅವರ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ತಕ್ಕಂತೆ ಬೋಧನೆ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ ಅಧ್ಯಕ್ಷತೆ ವಹಿಸಿದ್ದರು. ಶಂಕ್ರಪ್ಪ, ಅನಂತ ಪದ್ಮನಾಭ ಕರಣಂ, ಮಾರ್ಗದಪ್ಪ, ಬಸವರಾಜ್, ಕುಬೇರಾಚಾರ್, ಜಿ.ಶುಭಾ, ವೀರನಗೌಡ, ಅಚ್ಚಪ್ಪ, ರವೀಂದ್ರ ಇಂಗಳಿಗಿ, ಎಚ್. ರುದ್ರಪ್ಪ ಉಪಸ್ಥಿತರಿದ್ದರು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕಾಂಗ್ರೆಸ್ ಸಭೆ ಇಂದು
ಹೂವಿನಹಡಗಲಿ: ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದೇ 18ರಂದು ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಟಿಕೆಟ್ ಆಕಾಂಕ್ಷಿಗಳ ಸಭೆ ಕರೆಯಲಾಗಿದೆ. ಸಂಜೆ 5.30ಕ್ಕೆ ಎಂ.ಪಿ.ಪ್ರಕಾಶ್ ಅವರ ತೋಟದಲ್ಲಿ ಜರುಗಲಿರುವ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ರವೀಂದ್ರ, ಮಾಜಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಪಾಲ್ಗೊಳ್ಳಲ್ದ್ದಿದಾರೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.