ರಾಯಚೂರು: ಸರ್ಕಾರಿ ನೌಕರರಿಂದ ಜನತೆ ಹೆಚ್ಚಿನ ಸೇವೆ ನಿರೀಕ್ಷಿಸುತ್ತಿದ್ದು, ಶೋಷಣೆ ಮುಕ್ತ ಸೇವೆಯನ್ನು ಬಯಸುತ್ತಿದ್ದಾರೆ. ಹೆಚ್ಚು ಉತ್ಸುಕತೆಯಿಂದ ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸಿ ಉತ್ತಮ ಸೇವೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಹೇಳಿದರು.
ಇಲ್ಲಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗುಲ್ಬರ್ಗ ವಿಭಾಗ ಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ನೌಕರಿ ಪಡೆಯಲು ಸಾಕಷ್ಟು ಸ್ಪರ್ಧೆ ಇರುವ ಈ ದಿನಗಳಲ್ಲಿ ಸರ್ಕಾರಿ ನೌಕರ ಎಂಬುದೇ ಹೆಮ್ಮೆಯ ವಿಷಯ ಎಂದರು.
ಸರ್ಕಾರಿ ನೌಕರರ ಮೇಲಿನ ಹಲ್ಲೆ ಪ್ರಕರಣ ಸೇರಿದಂತೆ ಹಲವು ಸಂಗತಿಗಳು ನೌಕರರು ಉತ್ತಮ ಸೇವೆ ಕಲ್ಪಿಸಲು ಅಡ್ಡಿಯಾಗಿವೆ. ಈ ಸಮ್ಮೇಳನದ ಮೂಲಕ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ನೌಕರರ ಒಗ್ಗಟ್ಟು ಬಲಗೊಳಿಸುವುದು, ಕಾರ್ಯಕ್ಷಮತೆ ಹೆಚ್ಚಿಸಿ ಉತ್ಸುಕತೆಯಿಂದ ಕೆಲಸ ಮಾಡಲು ಇಂಥ ಸಮ್ಮೇಳನ ಅವಶ್ಯ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನೋಜಕುಮಾರ ಜೈನ್, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಎಲ್. ಭೈರಪ್ಪ, ಗುಲ್ಬರ್ಗ ವಿಭಾಗೀಯ ಉಪಾಧ್ಯಕ್ಷ ಎ ಬಾಲಸ್ವಾಮಿ ಕೊಡ್ಲಿ, ರಾಜ್ಯ ಉಪಾಧ್ಯಕ್ಷ ಶಂಭುಲಿಂಗನಗೌಡ, ಜಿಲ್ಲಾ ಅಧ್ಯಕ್ಷರಾದ ಬಿ.ಎಸ್. ದೇಸಾಯಿ (ಗುಲ್ಬರ್ಗ), ಬಸವರಾಜ ಭರಶೆಟ್ಟಿ (ಬೀದರ್), ಲಿಂಗಣ್ಣನವರ (ಬಾಗಲಕೋಟೆ), ಚಂದ್ರಶೇಖರ (ಬಳ್ಳಾರಿ) ಮತ್ತಿತರರು ವೇದಿಕೆಯಲ್ಲಿದ್ದರು. ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಮೆಹಬೂಬ್ ಪಾಷಾ ಮೂಲಿಮನಿ ಪ್ರಾಸ್ತಾವಿಕ ಮಾತನಾಡಿದರು.