ಉಡುಪಿ: `ನಮ್ಮ ಸಂಸ್ಕೃತಿಯನ್ನು ಉನ್ನತ ಮಟ್ಟದಲ್ಲಿ ಸಂವಹನ ಮಾಡಬಲ್ಲ ಮಾಧ್ಯಮ ಸಂಗೀತ' ಎಂದು ವಿಮರ್ಶಕ ಎ.ಈಶ್ವರಯ್ಯ ಹೇಳಿದರು.
ಮಣಿಪಾಲ ವಿಶ್ವವಿದ್ಯಾಲಯ ಕಟ್ಟಡದಲ್ಲಿ ಉಡುಪಿಯ ರಾಗ ಧನ ಸಂಸ್ಥೆ ಇತ್ತೀಚೆಗೆ ಏರ್ಪಡಿಸಿದ್ದ ಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದುಕಿನಲ್ಲಿ ಸಂಗೀತದಂತಹ ಸಾಂಸ್ಕೃತಿಕ ಕಲಾ ಪ್ರಕಾರಗಳು ಎಷ್ಟು ಅಗತ್ಯ ಅನ್ನುವುದು ಸಾಂಸ್ಕೃತಿಕ ಪ್ರಜ್ಞೆ ಇರುವವರಿಗೆ ಮಾತ್ರ ತಿಳಿದಿದೆ ಎಂದರು.
ಮೂರು ದಿನಗಳ ಉತ್ಸವಕ್ಕೆ ಮಣಿಪಾಲ ವಿಶ್ವವಿದ್ಯಾಲಯದ ಸಾಂಸ್ಕೃತಿಕ ಸಂಯೋಜನೆ ಸಮಿತಿಯ ಅಧ್ಯಕ್ಷ ಡಾ.ಮುರಳೀಧರ ವಿ. ಪೈ ಚಾಲನೆ ನೀಡಿದರು.
ಸಂಗೀತೋತ್ಸವದಲ್ಲಿ ಚೆನ್ನೈನ ವಸುಧಾ ಕೇಶವ, ಜ್ಯೋತಿಲಕ್ಷ್ಮಿ ಉಡುಪಿ, ಹರೀಶ್ ಹೆಗಡೆ ಹಳಹಳ್ಳಿ, ಮಂಗಳೂರಿನ ಕೃಷ್ಣಪವನ್ ಕುಮಾರ್ ಅವರ ಶಾಸ್ತ್ರೀಯ ಸಂಗೀತ ನಡೆಯಿತು. ಪಿಳ್ಳಾರಿ ಗೀತೆಗಳು ಹಾಗೂ ತ್ಯಾಗರಾಜರ ಘನರಾಗ, ಪಂಚರತ್ನ ಕೃತಿಗಳ ಗೋಷ್ಠಿ ಗಾಯನವೂ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಮಂಗಳೂರಿನ ಮಣಿಕೃಷ್ಣಸ್ವಾಮಿ ಅಕಾಡಮಿಯ ನಿರ್ದೇಶಕ ಪಿ.ನಿತ್ಯಾನಂದ ರಾವ್, ರಾಗ ಧನ ಸಂಸ್ಥೆಯ ಕಾರ್ಯದರ್ಶಿ ವಿ.ಅರವಿಂದ ಹೆಬ್ಬಾರ್ ಉಪಸ್ಥಿತರಿದ್ದರು. ಬಳಿಕ ಚೆನ್ನೈನ ರಂಜನಿ ಮತ್ತು ಗಾಯತ್ರಿ ಬಳಗದವರು ಪ್ರಧಾನ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿ ಕೊಟ್ಟರು.