ಬೆಂಗಳೂರು: `ಸಕಾರಾತ್ಮಕ ಪ್ರವೃತ್ತಿ ಹಾಗೂ ಉತ್ಸಾಹವನ್ನು ಇತರರಿಗೆ ಹಂಚುವವರು ಉತ್ತಮ ಸಂವಹನಕಾರರು~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅಭಿಪ್ರಾಯಪಟ್ಟರು.
`ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ~ (ಪಿಆರ್ಸಿಐ)ದ ಬೆಂಗಳೂರು ಘಟಕದ ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರ ನಡೆದ ವಿಶ್ವ ಸಂವಹನ ದಿನಾಚರಣೆ ಹಾಗೂ ಪಿಆರ್ಸಿಐ ಸಂವಹನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಜನಸಾಮಾನ್ಯರ ನೆರವಿಗೆ ಸರ್ಕಾರ ಅನೇಕ ಕಾರ್ಯಪಡೆಗಳನ್ನು ರಚಿಸಿದೆ. ಜ್ಞಾನ ಆಯೋಗ, ವಿಜ್ಞಾನ ಆಯೋಗವನ್ನು ಇನ್ನಷ್ಟು ಬಲಪಡಿಸಲು ಮಾಧ್ಯಮ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಗಳ ಸಹಕಾರ ಅಗತ್ಯ~ ಎಂದರು.
ಪ್ರಾಧ್ಯಾಪಕ ಡಾ.ಎಚ್.ಎಸ್. ಈಶ್ವರ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ, ಚಿತ್ರಕಲಾವಿದ ಡಾ.ಬಿ.ಕೆ.ಎಸ್. ವರ್ಮ, ಸಂಗೀತ ನಿರ್ದೇಶಕ ಹಂಸಲೇಖ, ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್, ಹಿರಿಯ ಚಿತ್ರನಟಿ ಬಿ.ವಿ. ರಾಧಾ, ಚಿತ್ರನಿರ್ದೇಶಕ ಆರ್. ಚಂದ್ರು, ರಂಗಭೂಮಿ ಕಲಾವಿದ ಕೆ.ಎಸ್.ಡಿ.ಎಲ್.ಚಂದ್ರು, ವನ್ಯಜೀವಿ ಛಾಯಾಗ್ರಾಹಕ ತಿಪ್ಪೆಸ್ವಾಮಿ, ಕಾರ್ಯಕ್ರಮ ನಿರೂಪಕ ನಾರಾಯಣ ಸ್ವಾಮಿ ಅವರಿಗೆ ಸಂವಹನ ಪ್ರಶಸ್ತಿ, ಪಿಆರ್ಸಿಐ ಸ್ಥಾಪಕ ಎಂ.ಬಿ. ಜಯರಾಂ ಅವರಿಗೆ ಶಾಂತಿ ರಾಯಭಾರಿ ಪ್ರಶಸ್ತಿಯ ಪ್ರಮಾಣಪತ್ರ ಪ್ರದಾನ ಮಾಡಲಾಯಿತು.
ಬಿಡಿಎ ಆಯುಕ್ತ ಭರತ್ಲಾಲ್ ಮೀನಾ, ಎಐಐಪಿಎ ಅಧ್ಯಕ್ಷ ಡಾ.ಅಸಿಫ್ ಬರೆಲ್ವಿ, ಪಿಆರ್ಸಿಐ ಅಧ್ಯಕ್ಷ ಎನ್.ಡಿ. ರಾಜ್ಪಾಲ್, ನಿಯೋಜಿತ ಅಧ್ಯಕ್ಷ ಆರ್.ಟಿ. ಕುಮಾರ್, ಬೆಂಗಳೂರು ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್ ಕೆ.ಆರ್, ನಿಯೋಜಿತ ಅಧ್ಯಕ್ಷ ಡಾ.ಬಿ.ಕೆ. ರವಿ ಉಪಸ್ಥಿತರಿದ್ದರು.