ಮುಂಬೈ (ಪಿಟಿಐ): ಹೆಬ್ಬೆರಳು ಗಾಯದಿಂದ ಬಳಲಿರುವ ಸಚಿನ್ ತೆಂಡೂಲ್ಕರ್ ಅವರಿಗೆ ನಾಲ್ಕು ವಾರ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ಮಾಡಿದ್ದಾರೆ.
ಆದ್ದರಿಂದ ಅವರು ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯಗಳ ಸರಣಿಯ ಬಾಕಿ ನಾಲ್ಕು ಪಂದ್ಯಗಳಿಗೂ ಲಭ್ಯವಾಗುತ್ತಿಲ್ಲ. ಆದ್ದರಿಂದ ಸಚಿನ್ ಬದಲಿಗೆ ಎಸ್.ಬದರೀನಾಥ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಎರಡನೇ ಪಂದ್ಯದಲ್ಲಿ ಆಡುವ ಮಟ್ಟಿಗೆ ತೆಂಡೂಲ್ಕರ್ ಚೇತರಿಸಿಕೊಳ್ಳುತ್ತಾರೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಗಾಯವು ಗುಣವಾಗಲು ಕಾಲಾವಕಾಶ ಅಗತ್ಯವಾಗಿದೆ. ಆದ್ದರಿಂದ ತಂಡವನ್ನು ಸೇರಿಕೊಳ್ಳಲು ಬದರೀನಾಥ್ಗೆ ಸೂಚನೆ ನೀಡಲಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಎನ್.ಶ್ರೀನಿವಾಸನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಚಿನ್ ಅವರ ಗೈರು ಭಾರತಕ್ಕೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ. ಏಕೆಂದರೆ ತಂಡದ ಪ್ರಮುಖ ಆಟಗಾರರು ಈಗಾಗಲೇ ಗಾಯದ ಕಾರಣ ಹಿಂದೆ ಸರಿದಿದ್ದಾರೆ. ರೋಹಿತ್ ಶರ್ಮ ಅವರೂ ಎರಡು ದಿನಗಳ ಹಿಂದೆಯಷ್ಟೆ ಗಾಯದ ಕಾರಣ ಸರಣಿಯಿಂದ ಹೊರಬಿದ್ದಿದ್ದರು.