ಪಡುಬಿದ್ರಿ: ಯುಪಿಸಿಎಲ್ ಯೋಜನೆ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್.ಆಚಾರ್ಯ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪಡುಬಿದ್ರಿಯಲ್ಲಿ ಬುಧವಾರ ಸಂಜೆ ರೈತ ಸಂಘದವರು ಡಾ.ಆಚಾರ್ಯರ ಪ್ರತಿಕೃತಿ ದಹಿಸಿದರು.
ಪಡುಬಿದ್ರಿ ಬಸ್ ನಿಲ್ದಾಣದಲ್ಲಿ ಸಂಜೆ 6 ಗಂಟೆಗೆ ಜಮಾವಣೆಗೊಂಡ ರೈತ ಸಂಘದ ಪ್ರತಿನಿಧಿಗಳು ಆಚಾರ್ಯರ ಪ್ರತಿಕೃತಿಯೊಂದಿಗೆ ‘ಯುಪಿಸಿಎಲ್ನೊಂದಿಗೆ ಆಚಾರ್ಯ ಪಡೆದ ಸೂಟ್ಕೇಸ್’ ಎಂಬ ಬಾಕ್ಸ್ ಇರಿಸಿ ಆಚಾರ್ಯ ಹಾಗೂ ಯುಪಿಸಿಎಲ್ ವಿರುದ್ಧ ಘೋಷಣೆ ಕೂಗಿದರು.
ಮೋಸ ಮಾಡಿದ ಆಚಾರ್ಯ: ಈ ಸಂದರ್ಭ ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ವಿಜಯಕುಮಾರ್ ಹೆಗ್ಡೆ ಮಾತನಾಡಿ, ಯುಪಿಸಿಎಲ್ ಯೋಜನೆಯಿಂದ ಜನಸಾಮಾನ್ಯರಿಗೆ ಹಲವು ರೀತಿಯ ಸಮಸ್ಯೆ ಎದುರಾಗಿದ್ದರೂ ಯಾವುದೇ ಸಮಸ್ಯೆ ಇಲ್ಲ ಎಂದು ಮುಖ್ಯಮಂತ್ರಿ ಅವರಿಗೆ ಯುಪಿಸಿಎಲ್ ಬಗ್ಗೆ ಆಚಾರ್ಯ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈ ಹೇಳಿಕೆ ಅಕ್ಷಮ್ಯ ಅಪರಾಧ. ಆಚಾರ್ಯರಿಗೆ ಮಾನವಿಯತೆ ಇದ್ದಿದ್ದರೆ ಮುಖ್ಯಮಂತ್ರಿ ಅವರಿಗೆ ಇಲ್ಲಿನ ಸಮಸ್ಯೆ ಬಗ್ಗೆ ಹೇಳುತ್ತಿದ್ದರು ಎಂದರು.
ಸಮಸ್ಯೆ ಮುಚ್ಚಿಟ್ಟು ಮುಖ್ಯಮಂತ್ರಿಗೆ ತಪ್ಪು ಮಾಹಿತಿ ನೀಡುವ ಮೂಲಕ ಜಿಲ್ಲೆ ಜನರಿಗೆ ಆಚಾರ್ಯರು ಮೋಸ ಮಾಡಿದ್ದಾರೆ. ಇಲ್ಲಿನ ಗಂಭೀರ ಸಮಸ್ಯೆಗಳನ್ನು ಪರಿಶೀಲಿಸಲು ಮುಖ್ಯಮಂತ್ರಿ ಅವರೇ ಇಲ್ಲಿಗೆ ಆಗಮಿಸಿ ಇಲ್ಲಿನ ಸಮಸ್ಯೆ ಅರಿತುಕೊಳ್ಳಲಿ. ಈ ಯೋಜನೆ ಬಂದ್ ಮಾಡಿಸಿಯೇ ಸಿದ್ಧ. ಯೋಜನೆ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಜಿಲ್ಲಾ ರೈತ ಸಂಘದ ಶಶಿಧರ ಶೆಟ್ಟಿ ಎಲ್ಲೂರು, ಸುಧಾಕರ ಶೆಟ್ಟಿ ಹೆಜ್ಮಾಡಿ, ಪೂವಪ್ಪ ಪೂಜಾರಿ, ನಿತಿನ್ ಶೆಟ್ಟಿ ಮುದರಂಗಡಿ, ಸುನೀಲ್ರಾಜ್ ಶೆಟ್ಟಿ, ಅನಿಲ್ ಶೆಟ್ಟಿ, ದಿನೇಶ್ ಶೆಟ್ಟಿ ಇದ್ದರು.