ಕೊಪ್ಪಳ: ಪಶು ಸಂಗೋಪನಾ ಸಚಿವ ರೇವೂ ನಾಯಕ ಬೆಳಮಗಿ ಬಳಸುತ್ತಿರುವ ಸರ್ಕಾರಿ ವಾಹನವನ್ನು ಜಪ್ತಿ ಮಾಡುವಂತೆ ಸೋಮವಾರ ರಾಜ್ಯ ಚುನಾವಣಾ ಆಯೋಗ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ.
ಸೆ. 9ರಂದು ನಗರದಲ್ಲಿ ಜರುಗಿದ ಬಿಜೆಪಿ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಚಿವ ರೇವೂ ನಾಯಕ ಬೆಳಮಗಿ ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿ ಜಿಲ್ಲೆಯ ಗಡಿಯೊಳಗೆ ತಮ್ಮ ವಾಹನವನ್ನು ತಂದಿದ್ದರು. ನಗರದಿಂದ 15 ಕಿ.ಮೀ. ದೂರದಲ್ಲಿರುವ ಸಿಮ್ಲಾ ಢಾಬಾ ಬಳಿ ನಿಲ್ಲಿಸಲಾಗಿದ್ದ ಸಚಿವ ಬೆಳಮಗಿ ಕಾರನ್ನು ಗಮನಿಸಿದ ಚುನಾವಣಾ ವೀಕ್ಷಕರು, ವಾಹನದೊಂದಿಗೆ ತಮ್ಮನ್ನು ಹಿಂಬಾಲಿಸುವಂತೆ ಸೂಚನೆ ನೀಡಿದ್ದರು. ಆದರೆ, ಈ ಸೂಚನೆಯನ್ನು ಪಾಲಿಸದ ಸಚಿವರ ವಾಹನದ ಚಾಲಕ, ಅಂದು ವಾಹನವನ್ನು ಹೊಸಪೇಟೆಯ್ತ ಒಯ್ದು ನಂತರ ಸಚಿವ ಬೆಳಮಗಿ ಅವರನ್ನು ಬೆಂಗಳೂರಿಗೆ ಕರೆದೊಯ್ದಿದ್ದ.
ಈ ಹಿನ್ನೆಲೆಯಲ್ಲಿ ಚುನಾವಣಾ ವೀಕ್ಷಕರು ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ರಾಜ್ಯ ಚುನಾವಣಾ ಆಯೋಗ ಕೂಡಲೇ ಸದರಿ ವಾಹನವನ್ನು ಜಪ್ತಿ ಮಾಡುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರಿಗೆ ಸೂಚನೆ ನೀಡಿದೆ.
ಕರಡಿ ಸಂಗಣ್ಣ ಬಿರುಸಿನ ಪ್ರಚಾರ
ಕೊಪ್ಪಳ: ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ನಗರದ ಸಿರಸಪ್ಪಯ್ಯನಮಠ.ಕೋಟೆ ಪ್ರದೇಶ, ಮಿಟ್ಟಿಕೇರಿ, ದಿಡ್ಡಿಕೇರಿ, ವಾರಕರಗಲ್ಲಿ, ಗಡಿಯಾರ ಕಂಬ, ಕುವೆಂಪು ನಗರ, ಕೊಲ್ಲಾಕಾರ ಓಣಿ, ಪಲ್ಟಾನ್ ಗಲ್ಲಿ ಮತ್ತಿತರ ಪ್ರದೇಶಗಳಲ್ಲಿ ಭಾನುವಾರ ಮನೆ-ಮನೆಗೆ ತೆರಳಿ ಮತ ಯಾಚಿಸಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಅಪ್ಪಣ್ಣ ಪದಕಿ, ನಗರಸಭೆ ಅಧ್ಯಕ್ಷ ಸುರೇಶ ದೇಸಾಯಿ, ನಗರಸಭೆ ಸದಸ್ಯರಾದ ಬಸವರಾಜ ಮಿಠಾಯಿ, ಮಹಿಬೂಸಾಬ ನಾಲಬಂದ್, ಚಿಕನ್ಪೀರಾ, ಆನಂದ ಆಡೂರು, ವಿರೂಪಾಕ್ಷಯ್ಯ ಗದಗಿನಮಠ, ಈರಣ್ಣ ಗಾಣಿಗೇರಿ, ಸಲಿಂಸಾಬ, ಯಮನೂರ ಸಾಬ ಮಕ್ಬೂಲಸಾಬ ಮನಿಯಾರ್, ಜಿಲಾನ್ ಮೈಲೈಕ್, ಬಾಬಾ ಅರಗಂಜಿ, ಮೆಕ್ಯಾನಿಕ್ ಪಾಷಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.