ಹೈದರಾಬಾದ್ (ಪಿಟಿಐ): ಸರ್ಕಾರದಿಂದ ಪಡೆದ ಲಾಭಕ್ಕೆ ಪ್ರತಿಯಾಗಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಒಡೆತನದ ಕಂಪೆನಿಗಳಲ್ಲಿ ಹೂಡಿಕೆ ನಡೆದಿರುವ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಬಿಐ ಮಂಗಳವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಎರಡು ಹೊಸ ಆರೋಪ ಪಟ್ಟಿಗಳಲ್ಲಿ, ಆಂಧ್ರದ ಭಾರಿ ಕೈಗಾರಿಕಾ ಸಚಿವೆ ಜೆ.ಗೀತಾ ರೆಡ್ಡಿ, ಇಬ್ಬರು ಮಾಜಿ ಸಚಿವರು ಮತ್ತು ಜಗನ್ಮೋಹನ್ ರೆಡ್ಡಿ ಅವರನ್ನು ಆರೋಪಿಗಳನ್ನಾಗಿ ಹೆಸರಿಸಿದೆ.
ಇಂದೂ ಟೆಕ್ಜೋನ್ ಮತ್ತು ಲೇಪಾಕ್ಷಿ ನಾಲೆಜ್ ಹಬ್ (ಎಲ್ಕೆಎಚ್) ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಈ ಆರೋಪ ಪಟ್ಟಿಗಳಲ್ಲಿ ಕ್ರಮವಾಗಿ 10 ಹಾಗೂ 14 ಜನರನ್ನು ಆರೋಪಿಗಳನ್ನಾಗಿ ಹೆಸರಿಸಿದೆ.
ಎರಡೂ ಆರೋಪಪಟ್ಟಿಗಳಲ್ಲಿ ಜಗನ್ ಮೊದಲನೇ ಆರೋಪಿಯಾಗಿದ್ದಾರೆ. ಜಗನ್ ಅವರ ಲೆಕ್ಕ ಪರಿಶೋಧಕ ವಿ.ವಿಜಯ್ ಸಾಯಿ ರೆಡ್ಡಿ, ಇಂದೂ ಗ್ರೂಪ್ನ ಪ್ರವರ್ತಕ ಶ್ಯಾಂ ಪ್ರಸಾದ್ ರೆಡ್ಡಿ ಅವರೂ ಈ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.
ಎಲ್ಕೆಎಚ್ ಪ್ರಕರಣ ಸಂಬಂಧ ಸಲ್ಲಿಕೆಯಾದ ಆರೋಪಪಟ್ಟಿಯಲ್ಲಿ ಗೀತಾ ರೆಡ್ಡಿ, ಮಾಜಿ ಸಚಿವ ಧರ್ಮನಾ ಪ್ರಸಾದ್ ರಾವ್ ಅವರು ಸೇರಿದ್ದಾರೆ.
ಇಂದೂ ಟೆಕ್ಜೋನ್ ವಿರುದ್ಧ ಸಲ್ಲಿಕೆಯಾದ ಆರೋಪಪಟ್ಟಿಯಲ್ಲಿ ಮತ್ತೊಬ್ಬ ಮಾಜಿ ಸಚಿವೆ ಪಿ.ಸಬಿತಾ ಇಂದ್ರಾ ರೆಡ್ಡಿ, ಹಿರಿಯ ಐಎಎಸ್ ಅಧಿಕಾರಿಗಳಾದ ರತ್ನಪ್ರಭಾ, ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಬಿ.ಪಿ.ಆಚಾರ್ಯ ಅವರೂ ಆರೋಪಿಗಳಾಗಿದ್ದಾರೆ.
ಎಲ್ಕೆಎಚ್ ಪ್ರಕರಣದಲ್ಲಿ, ಆಚಾರ್ಯ ಅವರ ಜತೆಗೆ ಹಿರಿಯ ಐಎಎಸ್ ಅಧಿಕಾರಿಗಳಾದ ಸ್ಯಾಮ್ ಬಾಬು ಮತ್ತು ಎಂ.ಸ್ಯಾಮುಯೆಲ್ ಅವರನ್ನೂ ಸಿಬಿಐ ಆರೋಪಿಗಳನ್ನಾಗಿ ಹೆಸರಿಸಿದೆ.
ಉಳಿದಂತೆ ಎಲ್ಕೆಎಚ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಬಾಲಾಜಿ, ಜಗತಿ ಪ್ರಕಾಶನ ಸಂಸ್ಥೆಗಳನ್ನೂ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.
ಐಎಎಸ್ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಲು ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಸಿಬಿಐ ನ್ಯಾಯಲಯಕ್ಕೆ ತಿಳಿಸಿತು.