ಹಾಸನ: `ತಿಂಗಳಿಗೆ ಆರರಿಂದ ಏಳು ಲಕ್ಷ ರೂಪಾಯಿ ತೆರಿಗೆ ವಸೂಲಾಗುತ್ತಿದ್ದರೂ ಒಂದೇ ಒಂದು ಅಭಿವೃದ್ಧಿಕಾ ರ್ಯ ಕೈಗೊಳ್ಳಲು ಆಗುತ್ತಿಲ್ಲ. ಇರುವ ವ್ಯವಸ್ಥೆಯನ್ನು ನಿರ್ವಹಿಸಿಕೊಂಡು ಹೋಗುವುದೇ ದೊಡ್ಡ ಸವಾಲು' ಇದು ಹಾಸನದ ಮಗ್ಗುಲಲ್ಲೇ ಇರುವ ಸತ್ಯ ಮಂಗಲ ಗ್ರಾಮ ಪಂಚಾಯಿತಿಯ ಸ್ಥಿತಿ.
ಬರುವ ಆದಾಯದಲ್ಲಿ ದೊಡ್ಡ ಪಾಲು ಬೀದಿ ದೀಪಗಳ ವಿದ್ಯುತ್ ಬಿಲ್ ಕಟ್ಟಲು ಹೋಗುತ್ತದೆ. ಸುಮಾರು ಎರಡು ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬರುತ್ತದೆ. ಸಿಬ್ಬಂದಿಯ ವೇತನಕ್ಕೆ 1.5 ಲಕ್ಷ ರೂಪಾಯಿ ಬೇಕಾಗುತ್ತದೆ. ಕಸ ವಿಲೇವಾರಿಗೆ ಸುಮಾರು 35 ಸಾವಿರ ರೂಪಾಯಿ ಬೇಕು. ಇದರ ಜತೆಗೆ ಈಗ ನೀರು ಸರಬರಾಜು ದೊಡ್ಡ ಸಮಸ್ಯೆಯಾಗಿದೆ. `ಈಗಿನ ಪರಿಸ್ಥಿತಿ ನೋಡಿದರೆ ಇರುವ ವ್ಯವಸ್ಥೆಯನ್ನು ಮುಂದುವರಿಸಿದರೆ ಸಾಕು ಎಂಬಂತಾಗಿದೆ' ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಪ್ಪ ನುಡಿಯುತ್ತಾರೆ.
ಕಳೆದ ಒಂದು ವರ್ಷದಿಂದ ಗ್ರಾಮ ಪಂಚಾಯಿತಿಯಲ್ಲಿ ನಿರ್ವಹಣೆ ಮಾತ್ರ ಆಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ ಸಣ್ಣ ಪುಟ್ಟ ಕಾಮಗಾರಿಗಳನ್ನು ಬಿಟ್ಟರೆ ಹೇಳಿಕೊಳ್ಳುವಂಥ ಕಾಮಗಾರಿ ಆಗಿಲ್ಲ. ಒಂದೇ ಒಂದು ರಸ್ತೆಯನ್ನೂ ದುರಸ್ತಿ ಮಾಡಿಲ್ಲ, ಹೊಸ ರಸ್ತೆಬಗ್ಗೆ ಮಾತನಾಡುವಂತೆಯೂ ಇಲ್ಲ, ಒಳಚರಂಡಿ ವ್ಯವಸ್ಥೆ ಮಾಡಬೇಕು ಎಂದು ಜನರು ಗೋಗರೆಯುತ್ತಿದ್ದರೂ ಅದನ್ನು ಕೈಗೆತ್ತಿಕೊಳ್ಳುವಷ್ಟು ಆರ್ಥಿಕ ಸಾಮ ರ್ಥ್ಯ ಗ್ರಾಮ ಪಂಚಾಯಿತಿಗೆ ಇಲ್ಲ.
ಉದ್ಯೋಗ ಖಾತರಿ ಬಳಕೆ ಇಲ್ಲ: ಉದ್ಯೋಗ ಖಾತರಿ ಯೋಜನೆ ಬಹು ತೇಕ ಗ್ರಾಮ ಪಂಚಾಯಿತಿಗಳಿಗೆ ಪ್ರಾಣವಾಯುವಿನಂತೆ ಕೆಲಸ ಮಾಡಿದೆ. ಆದರೆ ಸತ್ಯಮಂಗಲ ಗ್ರಾಮ ಪಂಚಾಯಿತಿಗೆ ಈ ಹಣ ಕನ್ನಡಿಯೊಳಗಿನ ಗಂಟಿನಂತಾಗಿ ಬಳಕೆ ಮಾಡಲಾಗುತ್ತಿಲ್ಲ. ಗ್ರಾಮ ಪಂಚಾಯಿತಿಯ ದೊಡ್ಡ ಭಾಗ ನಗರದ ವ್ಯಾಪ್ತಿಯೊಳಗೆ ಬರುತ್ತದೆ. ಉದ್ಯೋಗ ಖಾತರಿಯಡಿ ಕೆಲಸ ಕೊಡಿ ಎಂದು ಕೇಳಿಕೊಂಡು ಯಾರೂ ಬರುತ್ತಿಲ್ಲ ಎಂಬುದು ದೊಡ್ಡ ಸಮಸ್ಯೆ.
ಜಿಲ್ಲೆಯ ಇತರ ಗ್ರಾಮ ಪಂಚಾಯಿತಿಗಳಲ್ಲಿ ಸಾವಿರಕ್ಕೂ ಹೆಚ್ಚು ಜಾಬ್ ಕಾರ್ಡ್ಗಳು ಆಗಿದ್ದರೂ ರಾಜ್ಯದ ಎರಡನೇ ಅತಿದೊಡ್ಡ ಗ್ರಾಮ ಪಂಚಾ ಯಿತಿ ಎನಿಸಿಕೊಂಡಿರುವ ಸತ್ಯಮಂಗಲದಲ್ಲಿ ಕೇವಲ 650 ಜಾಬ್ಕಾರ್ಡ್ಗಳಿವೆ. ಪ್ರಸಕ್ತ ಸಾಲಿನಲ್ಲಿ 27 ಲಕ್ಷ ರೂಪಾಯಿಯ ಕಾಮಗಾರಿಗೆ ಕ್ರಿಯಾ ಯೋಜನೆ ಮಾಡ್ದ್ದಿದಾರೆ. ಐದು ಲಕ್ಷ ರೂಪಾಯಿಯ ಒಂದು ಚರಂಡಿ ಕಾಮ ಗಾರಿ ಬಿಟ್ಟರೆ ಬೇರೆ ಕಾಮಗಾರಿ ಆಗು ತ್ತಿಲ್ಲ. ಉದ್ಯೋಗ ಖಾತ್ರಿಯಡಿ ಶೇ 20 ಹಣವನ್ನು ರಸ್ತೆ ಕಾಮಗಾರಿಗೆ ಬಳಸಲು ಅವಕಾಶವಿದ್ದರೂ ಕಾರ್ಮಿಕರೇ ಬಾರದಿದ್ದರೆ ಕಾಮಗಾರಿ ಮಾಡುವುದು ಹೇಗೆ ಎಂಬುದು ಗ್ರಾಮ ಪಂಚಾಯಿತಿ ಸಮಸ್ಯೆ.
`650 ಜಾಬ್ ಕಾರ್ಡ್ಗಳಿದ್ದರೂ ಉದ್ಯೋಗ ಕೊಡಿ ಎಂದು ಕೇಳಿಕೊಂಡು ಯಾರೂ ಗ್ರಾಮ ಪಂಚಾಯಿತಿಗೆ ಬಂದಿಲ್ಲ' ಎಂದು ಪಿಡಿಒ ಚಂದ್ರಪ್ಪ ನುಡಿಯುತ್ತಾರೆ.
ಒಂದೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ದುಡ್ಡಿಲ್ಲ, ಇನ್ನೊಂದೆಡೆ ಉದ್ಯೋಗ ಖಾತರಿಯಲ್ಲಿ ದುಡ್ಡಿದ್ದರೂ ಬಳಸಿಕೊಳ್ಳಲು ಆಗುತ್ತಿಲ್ಲ. ಇದು ಗ್ರಾಮ ಪಂಚಾಯಿತಿಯ ಸಮಸ್ಯೆ.
ಹೆಗ್ಗಳಿಕೆಯೇ ಶಾಪ: ರಾಜ್ಯದ ಎರಡನೇ ಅತಿದೊಡ್ಡ ಗ್ರಾಮ ಪಂಚಾಯಿತಿ ಎಂಬುದೇ ಸತ್ಯಮಂಗಲಕ್ಕೆ ಶಾಪವಾಗಿದೆ. ಬೇಕಾದಷ್ಟು ಹಣ ಇಲ್ಲದೆ ಅಭಿವೃದ್ಧಿ ಮಾಡಲಾಗದೆ ಜನರಿಂದ ನಿತ್ಯ ದೂಷಣೆಗೆ ಒಳಗಾಗಬೇಕಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ವಿದ್ಯಾನಗರದ ಭಾಗದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ನೆಲೆಸಿರುವುದರಿಂದ ಅವರು ತಮ್ಮ ಪ್ರಭಾವ ಬಳಸಿ ಜಿಲ್ಲಾ ಪಂಚಾಯಿತಿಯ ವಿವಿಧ ಯೋಜನೆಗಳಡಿ ರಸ್ತೆ, ಚರಂಡಿ ವ್ಯವಸ್ಥೆ ಮಾಡಿಸಿಕೊಂಡಿದ್ದಾರೆ. ಉಳಿದ ಭಾಗದ ಜನರ ಸ್ಥಿತಿ ಕೇಳುವವರೇ ಇಲ್ಲದಂತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.