ಬೀಜಿಂಗ್ (ಪಿಟಿಐ): ಕಲ್ಲಿದ್ದಲಿನ ವಿಚಾರದಲ್ಲಿ ಆಸ್ಟ್ರೇಲಿಯಾ ಮೇಲಿನ ಅವಲಂಬನೆಯನ್ನು ಕಡಿತಗೊಳಿಸಿಕೊಳ್ಳುವ ಉದ್ದೇಶದಿಂದ ಭಾರತ ಸರ್ಕಾರ ಮಂಗೋಲಿಯಾದಲ್ಲಿ ಗಣಿಯನ್ನು ಹೊಂದಲಿದ್ದು ಅಲ್ಲಿ ಮೊದಲ ಉಕ್ಕು ಕಾರ್ಖಾನೆ ನಿರ್ಮಿಸುವ ಯೋಜನೆಯನ್ನು ಕೂಡ ಹೊಂದಿದೆ.
ಭಾರತೀಯ ಉಕ್ಕು ಪ್ರಾಧಿಕಾರದ (ಎಸ್ಎಐಎಲ್) ಮುಖ್ಯಸ್ಥ ಸಿ.ಎಸ್. ವರ್ಮ, ಯು.ಪಿ.ಸಿಂಗ್ ಹಾಗೂ ಉಕ್ಕು ಖಾತೆ ಸಚಿವಾಲಯದ ಜಂಟಿ ಕಾರ್ಯದರ್ಶಿಗಳನ್ನೊಳಗೊಂಡ ಭಾರತೀಯ ಪ್ರತಿನಿಧಿಗಳ ನಿಯೋಗವು ಶುಕ್ರವಾರ ಉಲಾನ್ಬಾತರ್ಗೆ ತೆರಳಲಿದ್ದು ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಲಿದೆ.
`ಕಳೆದ ಒಂದು ವರ್ಷದಿಂದ ಈ ಕುರಿತಾಗಿ ಮಾತುಕತೆ ನಡೆಯುತ್ತಿದ್ದು, ಮಂಗೋಲಿಯಾ ಸರ್ಕಾರದೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಿದ್ದೇವೆ~ ಎಂದು ಕಳೆದ ಎರಡು ದಿನಗಳಿಂದ ಚೀನಾದ ಉಕ್ಕು ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಹಾಗೂ ಉತ್ಪಾದಕರ ಜತೆ ಮಾತುಕತೆ ನಡೆಸಿದ ನಂತರ ವರ್ಮಾ ಈ ವಿಷಯ ತಿಳಿಸಿದ್ದಾರೆ.
`ಮಂಗೋಲಿಯಾದಲ್ಲಿ ಉತ್ತಮ ಗುಣಮಟ್ಟದ ಹಲವು ಕಲ್ದ್ದ್ದಲು ಗಣಿಗಳಿವೆ. ಅಲ್ಲಿನ ಸರ್ಕಾರ ಕೆಲವು ಉತ್ತಮ ಗಣಿ ಪ್ರದೇಶ ಹಂಚಿಕೆ ಮಾಡಿದ ನಂತರ ಆ ಕಲ್ಲಿದ್ದಲನ್ನು ಉಕ್ಕು ಕಾರ್ಖಾನೆಗೆ ಬಳಸುತ್ತೇವೆ. ಹಾಗೂ ಹೆಚ್ಚಿನ ಕಲ್ಲಿದ್ದಲನ್ನು ಚೀನಾದ ಬಂದರುಗಳ ಮೂಲಕ ಭಾರತಕ್ಕೆ ಕಳುಹಿಸಲಾಗುವುದು~ ಎಂದು ಅವರು ಹೇಳಿದ್ದಾರೆ.
`ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ಕಲ್ದ್ದ್ದಲಿನ ಬೆಲೆ ಇತ್ತೀಚಿನ ದಿನಗಳಲ್ಲಿ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಉಕ್ಕು ಉತ್ಪಾದನೆ ಅತ್ಯಂತ ವೆಚ್ಚದಾಯಕವಾಗಿ ಪರಿಣಮಿಸಿದೆ. ಹೀಗಾಗಿ ಈ ಕುರಿತು ಆಸ್ಟ್ರೇಲಿಯಾ ಅವಲಂಬನೆಯಿಂದ ತಪ್ಪಿಸಿಕೊಳ್ಳಲು ಭಾರತ ಇಡುತ್ತಿರುವ ಮೊದಲ ಹೆಜ್ಜೆ ಇದಾಗಿದೆ~ ಎಂದಿದ್ದಾರೆ.
`ಪ್ರತಿ ವರ್ಷ 3.5 ಕೋಟಿ ಟನ್ ಕಲ್ಲಿದ್ದಲು ಭಾರತಕ್ಕೆ ಆಮದಾಗುತ್ತಿದ್ದು ಅದರಲ್ಲಿ ಸುಮಾರು ಶೇ 60-70 ರಷ್ಟು ಕಲ್ಲಿದ್ದಲು ಆಸ್ಟ್ರೇಲಿಯಾದಿಂದ ಆಮದಾಗುತ್ತಿದೆ. ಅಲ್ಲದೆ ಅಮೆರಿಕ ಹಾಗೂ ನ್ಯೂಜಿಲೆಂಡ್ನಿಂದಲೂ ಈ ಕಲ್ಲಿದ್ದಲನ್ನು ಖರೀದಿಸಲಾಗುತ್ತಿದೆ~ ಎಂದು ಅವರು ಮಾಹಿತಿ ನೀಡಿದ್ದಾರೆ.
`ದೇಶೀ ನೆಲದಲ್ಲಿ ಉಕ್ಕು ಕಾರ್ಖಾನೆಗಳಿಗೆ ಅಗತ್ಯವಿರುವ ಉತ್ತಮ ಗುಣಮಟ್ಟದ ಕಲ್ಲಿದ್ದಲು ಲಭ್ಯವಿಲ್ಲ. 2020ರ ಸುಮಾರಿಗೆ ಉಕ್ಕು ಉತ್ಪಾದನೆ ಪ್ರಮಾಣವನ್ನು 8 ಕೋಟಿ ಟನ್ನಿಂದ 20 ಕೋಟಿ ಟನ್ನಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ~ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.