ಚಾಮರಾಜನಗರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತನ್ನ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವ ಉದ್ದೇಶದಿಂದ ಹೋಬಳಿ ಘಟಕಗಳನ್ನು ರಚಿಸಿದೆ.
ಪರಿಷತ್ತಿನ ಸಂಸ ಸಭಾಂಗಣದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ 6 ಹೋಬಳಿಗಳಿಗೆ ಕಸಾಪ ಜಿಲ್ಲಾ ಅಧ್ಯಕ್ಷ ಸೋಮಶೇಖರ ಬಿಸಲ್ವಾಡಿ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಪತ್ರ ವಿತರಿಸಿದರು. ನಂತರ ಮಾತನಾಡಿದ ಅವರು, ‘ಕಸಾಪ ಸಾಹಿತ್ಯ, ನೆಲ, ಜಲ ಸಂರಕ್ಷಣೆ ಮಾಡುತ್ತಿದೆ. ಈ ನೆಲದ ಸಂಸ್ಕೃತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಸಂಘಟಿಸುತ್ತಿದೆ.
ಹೋಬಳಿ ಘಟಕಗಳ ರಚನೆಯಿಂದ ಪರಿಷತ್ತಿನ ಚಟುವಟಿಕೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಲಿವೆ ಎಂದರು. ಪರಿಷತ್ತಿನ ಬಗ್ಗೆ ನಾಡಿನ ಪ್ರತಿಯೊಬ್ಬರಿಗೂ ಅರಿವು ಉಂಟಾಗಬೇಕು. ಮುಂಬರುವ ಮೇ ತಿಂಗಳಿನಿಂದ ಪರಿಷತ್ತಿನ ಶತಮಾನೋತ್ಸವ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಜಿಲ್ಲಾದ್ಯಂತ ಹಲವು ಕಾರ್ಯಕ್ರಮಗಳನ್ನು ಸಂಘಟಿಸಲಾಗುವುದು ಎಂದು ಹೇಳಿದರು.
ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಹೋಬಳಿ ಘಟಕದ ಅಧ್ಯಕ್ಷರಾಗಿ ಎಸ್. ನಟರಾಜು, ಹರವೆ ಹೋಬಳಿ ಘಟಕದ ಅಧ್ಯಕ್ಷರಾಗಿ ಪಿ. ಮಹದೇವಸ್ವಾಮಿ, ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಹೋಬಳಿ ಘಟಕದ ಅಧ್ಯಕ್ಷರಾಗಿ ಸದಾಶಿವಮೂರ್ತಿ, ಗುಂಡ್ಲುಪೇಟೆ ಕಸಬಾ ಹೋಬಳಿ ಅಧ್ಯಕ್ಷರಾಗಿ ಗುಂ.ಪು. ದೇವರಾಜು, ಯಳಂದೂರು ಕಸಬಾ ಹೋಬಳಿ ಅಧ್ಯಕ್ಷರಾಗಿ ಗುಂಬಳ್ಳಿ ಬಸವರಾಜು, ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯ ಹೋಬಳಿ ಅಧ್ಯಕ್ಷರಾಗಿ ಎನ್. ಉಮಾಶಂಕರ ಅವರಿಗೆ ಪ್ರಮಾಣವಚನ ಬೋಧಿಸಿ ಪರಿಷತ್ತಿನ ಚಟುವಟಿಕೆ ಕುರಿತು ಮಾಹಿತಿ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಸಾಪ ಪದಾಧಿಕಾರಿಗಳಾದ ಕೆಂಪನಪುರ ಸಿದ್ದರಾಜು, ನಾಗೇಶ್ ಸೋಸ್ಲೆ, ಚಿಕ್ಕಬಸವಯ್ಯ ಮಣಗಳ್ಳಿ, ಪಿ.ಸಿ. ರಾಜಶೇಖರ್, ಮಹದೇವಸ್ವಾಮಿ ಕಟ್ನವಾಡಿ ಹಾಜರಿದ್ದರು.