ತುಮಕೂರು: ತುರುವೇಕೆರೆಯಲ್ಲಿ ಫೆ.10, 11ರಂದು ನಡೆಯಲಿರುವ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕವಿ ಡಾ.ದೊಡ್ಡರಂಗೇಗೌಡ ಸರ್ವಾನು ಮತದಿಂದ ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸೋ.ಮು.ಭಾಸ್ಕರಾಚಾರ್ ಅಧ್ಯಕ್ಷತೆಯಲ್ಲಿ ಜರುಗಿದ ಪರಿಷತ್ನ ಕಾರ್ಯಕಾರಿಣಿಯಲ್ಲಿ ಈ ಆಯ್ಕೆ ನಡೆದಿದೆ.
ದೊಡ್ಡರಂಗೇಗೌಡರು ಜಿಲ್ಲೆಯ ಮಧುಗಿರಿ ತಾಲ್ಲೂಕಿನವರು. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಅವರು ಪ್ರಸ್ತುತ ವಿಧಾನ ಪರಿಷತ್ ಸದಸ್ಯರು.
ಪರಿಚಯ: ಶಿಕ್ಷಣ, ಸಾಹಿತ್ಯ, ಚಲನಚಿತ್ರ, ಸುಗಮ ಸಂಗೀತ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಜಾನಪದ ಸತ್ವ ಮತ್ತು ಭಾವಗೀತೆಯ ಲಾಲಿತ್ಯ ಹಾಗೂ ಹಳ್ಳಿಯ ಭಾಷೆಯನ್ನು ತಮ್ಮ ಸಾಹಿತ್ಯದಲ್ಲಿ ಬಳಕೆ ಮಾಡಿರುವುದು ಇವರ ಅಗ್ಗಳಿಕೆ.
ವಿದ್ಯಾರ್ಥಿ ದೆಸೆಯಿಂದಲೇ ಕಥೆ, ಕವಿತೆ, ವಿಮರ್ಶೆ ಬರೆಯುತ್ತಾ ಬಂದಿರುವ ಅವರು 80ಕ್ಕೂ ಹೆಚ್ಚು ವಿವಿಧ ರೀತಿಯ ಕೃತಿಗಳನ್ನು ಬರೆದಿದ್ದಾರೆ. ಐನೂರಕ್ಕೂ ಹೆಚ್ಚು ಕನ್ನಡ ಚಿತ್ರಗೀತೆಗಳು, ನೂರಕ್ಕೂ ಹೆಚ್ಚು ದೂರದರ್ಶನ ಧಾರಾವಾಹಿಗಳಿಗೆ ಶೀರ್ಷಿಕೆ ಸಾಹಿತ್ಯ ಗೀತೆ ರಚಿಸಿದ್ದಾರೆ.
ಐವತ್ತಕ್ಕೂ ಹೆಚ್ಚು ಭಾವಗೀತೆ, 30ಕ್ಕೂ ಅಧಿಕ ಭಕ್ತಿಗೀತೆಗಳ ಧ್ವನಿಸುರುಳಿಗಳು ಹೊರ ಬಂದಿವೆ. ಮಾವು-–ಬೇವು ಧ್ವನಿಸುರುಳಿ ಮನೆ ಮಾತಾಗಿದೆ. ಅವರ 47 ಕನ್ನಡ ಕವಿತೆಗಳು ಹಿಂದಿ ಭಾಷೆಗೆ ಅನುವಾದಿತಗೊಂಡಿವೆ.