ನವದೆಹಲಿ (ಐಎಎನ್ಎಸ್): ಖಾಸಗಿ ಕಂಪೆನಿಯೊಂದಕ್ಕೆ ಲಾಭದಾಯಕ ಗುತ್ತಿಗೆ ನೀಡಲು 3 ಲಕ್ಷ ರೂಪಾಯಿಗಳ ಲಂಚ ಪಡೆದುದಕ್ಕಾಗಿ ದೆಹಲಿ ನ್ಯಾಯಾಲಯದಿಂದ 5 ವರ್ಷಗಳ ಕಠಿಣ ಸೆರೆವಾಸ ಶಿಕ್ಷೆಗೆ ಒಳಗಾಗಿರುವ ಮಾಜಿ ದೂರಸಂಪರ್ಕ ಸಚಿವ ಸುಖ್ ರಾಮ್ ಅವರಿಗೆ ದೆಹಲಿ ಹೈಕೋರ್ಟ್ ಅವರು ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಜಾಮೀನು ನೀಡಿದೆ.
ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುರೇಶ್ ಕೇಟ್ ಅವರು ಸುಖ್ರಾಮ್ ಅವರಿಗೆ ಜಾಮೀನಿಗಾಗಿ 10 ಲಕ್ಷ ರೂಪಾಯಿಯ ಎರಡು ಭದ್ರತೆಗಳನ್ನು ಒದಗಿಸುವಂತೆ ಆದೇಶಿಸಿದರು.
ಅರ್ಜಿದಾರ (ಸುಖ್ರಾಮ್) ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ನೀಡಲಾಗಿದೆ ಹಾಗೂ ಪ್ರಕರಣ ಇತ್ಯರ್ಥಗೊಳುವ ವರೆಗೂ ಅವರ ಶಿಕ್ಷೆಯನ್ನು ಅಮಾನತ್ತಿನಲ್ಲಿಡಲಾಗುವುದು ಎಂದು ನ್ಯಾಯಮೂರ್ತಿಗಳು ಹೇಳಿದರು.
86ರ ಹರೆಯದ ಸುಖ್ ರಾಮ್ ಅವರು ಪಿ.ವಿ. ನರಸಿಂಹ ರಾವ್ ಅವರ ಸಂಪುಟದಲ್ಲಿ ದೂರಸಂಪರ್ಕ ಸಚಿವರಾಗಿದ್ದಾಗ ಹರ್ಯಾಣ ಟೆಲಿಕಾಂ ಲಿಮಿಟೆಡ್ (ಎಚ್ ಟಿ ಎಲ್) ಎಂಬ ಖಾಸಗಿ ಸಂಸ್ಥೆಗೆ 30 ಕೋಟಿ ರೂಪಾಯಿಗಳ ಗುತ್ತಿಗೆ ನೀಡಲು ತಮ್ಮ ಹುದ್ದೆಯನ್ನು ದುರುಪಯೋಗಿಸಿಕೊಂಡು ಅಪರಾಧ ಎಸಗಿದ್ದಾರೆ ಎಂದು ಹೇಳಿದ ದೆಹಲಿ ನ್ಯಾಯಾಲಯವು ಶನಿವಾರ ಸುಖ್ ರಾಮ್ ಅವರಿಗೆ 5 ವರ್ಷಗಳ ಕಠಿಣ ಸೆರೆವಾಸ ಹಾಗೂ 4 ಲಕ್ಷ ರೂಗಳ ದಂಡ ವಿಧಿಸಿತ್ತು.