ಬೆಂಗಳೂರು: ಮಡೆ ಮಡೆ ಸ್ನಾನ ವಿರೋಧಿಸಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿಗಳ ನೇತೃತ್ವದಲ್ಲಿ ವಿವಿಧ ಮಠಗಳ ಮಠಾಧೀಶರು ನಗರದ ಬಸನವಗುಡಿಯಲ್ಲಿರುವ ನಿಡುಮಾಮಿಡಿ ಮಠದಲ್ಲಿ ಗುರುವಾರ ಉಪವಾಸ ಸತ್ಯಾಗ್ರಹ ಮಾಡಿದರು. ಬೆಳಿಗ್ಗೆ ಆರು ಗಂಟೆಗೆ ಸೂರ್ಯ ಉದಯಿಸಿದಾಗ ಸತ್ಯಾಗ್ರಹ ಆರಂಭಿಸಿದ ಸ್ವಾಮೀಜಿಗಳು, ಸಂಜೆ ಸೂರ್ಯಾಸ್ತದವರೆಗೂ ಉಪವಾಸ ಕುಳಿತರು.
ಈ ಸಂದರ್ಭದಲ್ಲಿ ಮಾತನಾಡಿದ ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿಗಳು, ‘ಮೌಢ್ಯದ ಸಂಕೇತವಾಗಿರುವ ಮಡೆ ಮಡೆ ಸ್ನಾನವನ್ನು ನಿಷೇಧಿಸಬೇಕು’ ಎಂದು ಆಗ್ರಹಿಸಿದರು. ‘ಎಂಜಲು ಎಲೆಗಳ ಮೇಲೆ ಉರುಳುವುದನ್ನು ದೇವರಿಗೆ ಸಲ್ಲಿಸುವ ಸೇವೆ ಎಂದುಕೊಂಡರೆ ಅದಕ್ಕಿಂತ ಮೌಢ್ಯ ಮತ್ತೊಂದು ಇರಲಾರದು.
ಉಡುಪಿ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಈ ಅನಿಷ್ಟ ಪದ್ಧತಿ ಆಚರಣೆಯಲ್ಲಿದೆ. ಇದರ ನಿರ್ಮೂಲನೆಗಾಗಿ ಪ್ರತಿಯೊಬ್ಬರು ಧ್ವನಿ ಎತ್ತಬೇಕು’ ಎಂದು ಕರೆ ನೀಡಿದರು. ಮಡೆ ಮಡೆ ಸ್ನಾನವನ್ನು ನಿಷೇಧಿಸುವಂತೆ ಕೋರಿ ಈ ಹಿಂದೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ‘ಗರ್ಭಗುಡಿಯಲ್ಲಿ ದೇವರಿಗೆ ಅನ್ನವನ್ನು ನೈವೇದ್ಯದ ರೂಪದಲ್ಲಿ ನೀಡಬೇಕು. ನಂತರ ನೈವೇದ್ಯವನ್ನು ದೇವಸ್ಥಾನದ ಪ್ರಾಂಗಣದಲ್ಲಿಟ್ಟು ಭಕ್ತರಿಗೆ ಉರುಳುಸೇವೆಗೆ ಅವಕಾಶ ನೀಡಬಹುದು ಎಂದು ಹೇಳಿತ್ತು. ಆದರೆ, ನಿರ್ದಿಷ್ಟ ಸಮುದಾಯವೊಂದರ ಜನ ಉಂಡು ಬಿಟ್ಟ ಎಂಜಲು ಎಲೆಯ ಮೇಲೆ ಭಕ್ತರು ಉರುಳುವ ಪದ್ಧತಿ ನಿರ್ಮೂಲನೆಯಾಗಬೇಕು’ ಎಂದು ಆದೇಶಿಸಿತ್ತು.
ಆದರೂ, ಚಂಪಾ ಷಷ್ಠಿ ಜಾತ್ರೆ ವೇಳೆ ಮಡೆ ಮಡೆ ಸ್ನಾನ ಪದ್ಧತಿ ಮುಂದುವರಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಭಕ್ತರು ಸ್ವ– ಇಚ್ಛೆಯಿಂದ ಉರುಳು ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳುತ್ತದೆ. ಆದರೆ, ಎಂಜಲು ಎಲೆಯ ಮೇಲೆ ಉರುಳುವುದರಿಂದ ತನಗೆ ಒಳ್ಳೆಯದಾಗುತ್ತದೆ ಎಂಬ ಭಾವನೆಯನ್ನು ಸ್ವಇಚ್ಛೆ ಎನ್ನಲಾಗದು. ಆ ರೀತಿಯ ತಪ್ಪು ಭಾವನೆಯನ್ನು ಜನರಲ್ಲಿ ಮೂಡಿಸಲಾಗಿದೆ’ ಎಂದು ಹೇಳಿದರು.
ವಿಶ್ವ ಒಕ್ಕಲಿಗರ ಪೀಠದ ಕುಮಾರ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ‘ತುಳು ಭಾಷೆಯಲ್ಲಿ ‘ಮಡೆ’ ಪದಕ್ಕೆ ಎಂಜಲು ಎನ್ನುವ ಅರ್ಥವಿದೆ. ಹೀಗಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಚರಣೆಯಲ್ಲಿರುವ ಈ ಪದ್ಧತಿಗೆ ಮಡೆ ಮಡೆ ಸ್ನಾನ ಎಂದು ಕರೆಯಲಾಗುತ್ತದೆ. ನಾವೆಲ್ಲರೂ ಸಮಾನರೆಂಬ ಭಾವನೆ ಇರುವ ಪ್ರಜ್ಞಾವಂತ ಸಮಾಜದಲ್ಲಿ ಇಂತಹ ಅಮಾನವೀಯ ಪದ್ಧತಿ ಇರಬಾರದು’ ಎಂದರು.
ಹರಿಹರ ಪಂಚಮಸಾಲಿ ಪೀಠದ ಸಿದ್ದಲಿಂಗ ಸ್ವಾಮೀಜಿ, ಬಾಗಲಕೋಟೆಯ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠದ ಈಶ್ವರಾನಂದ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಸೇರಿ 20ಕ್ಕೂ ಹೆಚ್ಚು ಸ್ವಾಮೀಜಿಗಳು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಜತೆಗೆ ಮೌಢ್ಯ ಆಚರಣೆ ತಡೆ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.