ನವದೆಹಲಿ (ಪಿಟಿಐ): ಜಾಮೀನಿನಲ್ಲಿ ಹೊರಗೆ ಬರಲು ವೈಯಕ್ತಿಕ ಖಾತರಿ ಪತ್ರಕ್ಕೆ ಸಹಿ ಹಾಕಲು ತಿರಸ್ಕರಿಸಿದ್ದನ್ನು ಅನುಸರಿಸಿ ಮಂಗಳವಾರ ಮುಂಜಾನೆ ಬಂಧಿತರಾದ ಅಣ್ಣಾ ಹಜಾರೆ ಅವರನ್ನು 7 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಅಣ್ಣಾ ಅವರನ್ನು ತಂಡದ ಇತರ ಪ್ರಮುಖರ ಜೊತೆಗೆ ತಿಹಾರ್ ಸೆರೆಮನೆಗೆ ಕಳುಹಿಸಲಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸಲು ಉದ್ದೇಶಿಸಿದ ಹಜಾರೆ ಅವರಿಂದ ಶಾಂತಿಭಂಗವಾಗಬಹುದು ಎಂಬ ಕಾರಣಕ್ಕಾಗಿ ಅವರನ್ನು ಬಂಧಿಸಿದ್ದ ಪೊಲೀಸರು ನಂತರ ಅವರನ್ನು ವಿಶೇಷ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಹಾಜರು ಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಪೊಲೀಸ್ ಕಮೀಷನರ್ ಬಿ.ಕೆ. ಗುಪ್ತಾ ಅವರು ಹಜಾರೆ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸುವ ಆಸಕ್ತಿ ಪೊಲೀಸರಿಗೆ ಇರಲಿಲ್ಲ ಎಂದು ಹೇಳಿದರು.
ಸಿಆರ್ ಪಿಸಿಯ ಸೆಕ್ಷನ್ 144ನ್ನು ಉಲ್ಲಂಘಿಸುವುದಿಲ್ಲ ಎಂಬುದಾಗಿ ಮುಚ್ಚಳಿಕೆ ಬರೆದುಕೊಟ್ಟಲ್ಲಿ ಮತ್ತು ಬೆಂಬಲಿಗರಿಗೂ ಸೆಕ್ಷನ್ ಉಲ್ಲಂಘಿಸದಂತೆ ಸೂಚಿಸಿದಲ್ಲಿ ಹಜಾರೆ ಅವರನ್ನು ವೈಯಕ್ತಿಕ ಖಾತರಿ ಪತ್ರದ ಆಧಾರದಲ್ಲಿ ಬಿಡುಗಡೆ ಮಾಡಲು ಪೊಲೀಸರು ಸಿದ್ದರಾಗಿದ್ದರು ಎಂದು ಅವರು ಹೇಳಿದರು.
ಮುಚ್ಚಳಿಕೆ ಬರೆದುಕೊಡಲು ಹಜಾರೆ ಅವರು ನಿರಾಕರಿಸಿದ್ದರಿಂದ ಮ್ಯಾಜಿಸ್ಟ್ರೇಟರು ಅವರನ್ನು 7 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಿದರು.
ಹಜಾರೆ ತಂಡದ ಇತರ ಧುರೀಣರಾದ ಕಿರಣ್ ಬೇಡಿ, ಅರವಿಂದ ಕೇಜ್ರಿವಾಲ್ ಮತ್ತು ಮನೋಜ್ ಸಿಸೋಡಿಯಾ ಅವರನ್ನೂ ಇಂತಹುದೇ ಕಾರಣಕ್ಕಾಗಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.