ತತ್ವ ಸಿದ್ಧಾಂತಕ್ಕೆ ಹೆಸರಾದ ಅನೇಕ ಸಂಸದರಲ್ಲಿ ಜೆ.ಬಿ.ಕೃಪಲಾನಿ ಪ್ರಮುಖರು. ಅವರು ಈಗ ಪಾಕಿಸ್ತಾನದ ಭಾಗವಾಗಿರುವ ಹೈದರಾಬಾದ್ ಪ್ರಾಂತ್ಯದಲ್ಲಿ ಜನಿಸಿದರು. ಅಂದಿನ ಮುಂಬೈ ವಿವಿಯಿಂದ ಪದವೀಧರರಾದ ಅವರು ಸುಚೇತಾ ಕೃಪಲಾನಿ ಅವರನ್ನು ಮದುವೆಯಾದರು. ಸುಚೇತಾ ಕೂಡ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.
ಖಾದಿ, ಗ್ರಾಮೋದ್ಯೋಗದಲ್ಲಿ ದುಡಿದ ಅವರು ಅಪ್ಪಟ ಗಾಂಧಿವಾದಿಯಾಗಿದ್ದರು. ವಿವಿಧ ಬಗೆಯ ವೃತ್ತಿಗಳಲ್ಲಿ ತೊಡಗಿದ್ದ ಅವರನ್ನು ದೇಶ ಆಚಾರ್ಯ ಕೃಪಲಾನಿ ಎಂದು ಕರೆಯಿತು. ಈ ಹೆಸರಿಗೆ ತಕ್ಕಂತೆ ಅವರು ಕೋಲ್ಕತ್ತ ವಿವಿಗೆ ಸೇರಿದ ಬಿಹಾರ್ ಭೂಮಿಕಾರ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಮುಂದೆ ಬನಾರಸ್ ಹಿಂದು ವಿವಿಯಲ್ಲಿ, ಗುಜರಾತ್ ವಿದ್ಯಾಪೀಠದಲ್ಲಿ ಸೇವೆ ಸಲ್ಲಿಸಿದರು. ಭಾರತ ರಾಷ್ಟ್ರೀಯ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅವರು ಭಾರತ ಸ್ವತಂತ್ರವಾಗುವ ವೇಳೆಗೆ ಅದರ ಅಧ್ಯಕ್ಷರಾಗಿದ್ದರು.
‘ವಿಜಿಲ್’ ಎಂಬ ರಾಜಕೀಯ ಪತ್ರಿಕೆ ನಡೆಸಿದ ಅವರು ನೆಹರೂ ಜತೆ ಭಿನ್ನಾಭಿಪ್ರಾಯ ಬಂದು ಕಾಂಗ್ರೆಸ್ ತ್ಯಜಿಸಿ 1951ರಿಂದ ಕಾಂಗ್ರೆಸ್ ಡೆಮಾಕ್ರಟಿಕ್ ಫ್ರಂಟ್ ಸ್ಥಾಪಿಸಿದರು. ಅನೇಕ ರಾಜಕೀಯ ಪಕ್ಷಗಳ ಸ್ಥಾಪನೆಗೆ ಕಾರಣರಾದ ಅವರು ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ, ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಲ್ಲಿ ಮುಖಂಡರಾಗಿ ಸೇವೆ ಸಲ್ಲಿಸಿದರು. ಮಹಾತ್ಮ ಗಾಂಧಿಯವರಿದ್ದಾಗ ಭಾರತದ ಭಾವಿ ಪ್ರಧಾನಿ ಯಾರಾಗಬೇಕೆಂದು ಮತಯಾಚನೆ ನಡೆದಾಗ ಮೊದಲ ಹೆಸರು ಬಂದದ್ದು ಸರ್ದಾರ್ ಪಟೇಲ್ ಅವರದು, ಎರಡನೇ ಹೆಸರು ಕೃಪಲಾನಿಯವರದಿತ್ತು. ಸ್ವಾರಸ್ಯವೆಂದರೆ ನೆಹರೂ ಹೆಸರು ಮೂರನೇ ಸ್ಥಾನದಲ್ಲಿತ್ತು, ಆದರೆ, ಗಾಂಧೀಜಿ ಅವರ ಸೂಚನೆಯಂತೆ ಪಟೇಲ್, ಕೃಪಲಾನಿ ಹಿಂದಕ್ಕೆ ಸರಿದಿದ್ದರು.
3 ಬಾರಿ ಲೋಕಸಭೆಗೆ ಕ್ರಮವಾಗಿ 1952–57,1957–62,1963–67ರಲ್ಲಿ ಸಂಸದರಾಗಿ ಕಾರ್ಯನಿರ್ವಹಿಸಿದರು. ಅವರು ಸದನದಲ್ಲಿ ಇರುವುದು ಸಂಸತ್ತಿನ ಘನತೆ ಹೆಚ್ಚಿಸುತ್ತದೆ ಎಂದು ಡಾ.ರಾಮ ಮನೋಹರ ಲೋಹಿಯಾ ಒಮ್ಮೆ ನುಡಿದಿದ್ದರು. ಶಿಕ್ಷಣ, ಆರ್ಥಿಕತೆ, ರಾಜಕೀಯ ಕುರಿತೂ ಇವರು ಪ್ರಬುದ್ಧ ಬರಹಗಳನ್ನು ಬರೆದಿದ್ದಾರೆ.