ಹುಬ್ಬಳ್ಳಿ: ಗ್ರಾಮೀಣ ಪ್ರದೇಶಗಳಿಗೆ ಪರಿಣಾಮಕಾರಿ ವೈದ್ಯಕೀಯ ಸೇವೆಯನ್ನು ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಕೋರುವುದಾಗಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕೇಂದ್ರ ಘಟಕದ ನಿಯೋಜಿತ ಅಧ್ಯಕ್ಷ ಡಾ. ಜಿ.ಕೆ. ರಾಮಚಂದ್ರಪ್ಪ ಇಲ್ಲಿ ತಿಳಿಸಿದರು.
ಐಎಂಎ ರಾಜ್ಯ ಘಟಕ, ನಗರದ ಕಿಮ್ಸ ಆವರಣದಲ್ಲಿ ಹಮ್ಮಿಕೊಂಡಿರುವ 77ನೇ ವಾರ್ಷಿಕ ಸಮ್ಮೇಳನ `ಮೆಡಿಕಾನ್ 2011~ಅನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
`ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಲಭ್ಯಗಳ ಕೊರತೆ ಇದೆ. ವೈದ್ಯಕೀಯ ಸೇವೆ ಕೂಡ ಸರಿಯಾಗಿ ಸಿಗುತ್ತಿಲ್ಲ. ಮೂಲಸೌಲಭ್ಯಗಳನ್ನು ಕಲ್ಪಿಸಿ ವೈದ್ಯರನ್ನು ನೇಮಕ ಮಾಡಬೇಕಾಗಿದೆ. ಕನಿಷ್ಠ 2015ರ ಒಳಗಾದರೂ ಇದನ್ನು ಸಾಧಿಸಲು ಕಾರ್ಯಕ್ರಮ ರೂಪಿಸಿಕೊಳ್ಳಬೇಕೆಎಂದು ಸರ್ಕಾರವನ್ನು ಆಗ್ರಹಿಸಲಾಗುವುದು~ ಎಂದು ತಿಳಿಸಿದರು.
ಸಲಹೆ: ಅನ್ಯಾಯವಾದಾಗ ಬೀದಿಗಿಳಿದು ಹೋರಾಡುವಂತೆ ರಾಜ್ಯದ ವೈದ್ಯರಿಗೆ ಸಲಹೆ ನೀಡಿದ ರಾಮಚಂದ್ರಪ್ಪ, ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ವೈದ್ಯರಿಗೆ ಹೋರಾಟ ಮನೋಭಾವ ಕಡಿಮೆ ಎಂದರು.
ಕೇಂದ್ರ ಸರ್ಕಾರ ಈ ಹಿಂದೆ ಬಿಆರ್ಎಂಎಸ್ಕೋರ್ಸ್ ಕಡ್ಡಾಯಮಾಡಲು ಹೊರಟಾಗ ನವದೆಹಲಿಯಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಕರ್ನಾಟಕದಿಂದ ಕೇವಲ ಒಬ್ಬರು ಮಾತ್ರ ಭಾಗವಹಿಸಿದ್ದರು.
ಸರ್ಕಾರ ಈಗ ಮತ್ತೆ ಈ ಕೋರ್ಸ್ ಕಡ್ಡಾಯ ಮಾಡಲು ಹೊರಟಿದೆ. ಈಗಲಾದರೂ ರಾಜ್ಯದ ವೈದ್ಯರು ಹೋರಾಟಕ್ಕೆ ಮುಂದಾಗಬೇಕು ಎಂದು ಅವರು ಹೇಳಿದರು.
ರಾಜ್ಯ ಸರ್ಕಾರದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥಾಪನಾ ಮಸೂದೆಯ ರೀತಿಯ ಮಸೂದೆಯೊಂದನ್ನು ಕೇಂದ್ರ ಸರ್ಕಾರವೂ ಜಾರಿಗೆ ತರಲು ಮುಂದಾಗಿದೆ. ಇದರಿಂದ ವೈದ್ಯರಿಗೆ ತೊಂದರೆಯಾಗಲಿದೆ. ಇದರ ವಿರುದ್ಧವೂ ಹೋರಾಡಲು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.