ಸೊರಬ: ತಾಲ್ಲೂಕಿನ ಹರೀಶಿಯಲ್ಲಿ ಈಚೆಗೆ ನಡೆದ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆ ವೇಳೆ ಶಾಸಕ ಎಚ್. ಹಾಲಪ್ಪ ಸ್ಥಳೀಯ ಗ್ರಾ.ಪಂ. ಅಧ್ಯಕ್ಷ ಉಮಾಪತಿ ಮೇಲೆ ಹಲ್ಲೆ ನಡೆಸಿದ್ದು, ಘಟನೆ ಕುರಿತು ಶೀಘ್ರ ತನಿಖೆ ನಡೆಸಬೇಕು, ಶಾಸಕರು ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ಜೆಡಿಎಸ್ ವತಿಯಿಂದ ಮಂಗಳವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕು ಕಚೇರಿ ಎದುರು ನಡೆದ ಸಭೆಯಲ್ಲಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಉಮಾಪತಿ ಘಟನೆ ಕುರಿತು ವಿವರಿಸಿದರು. ಶಾಸಕರು ತಮ್ಮನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದು, ಅಲ್ಲದೇ ಒದ್ದಿದ್ದಾರೆ ಎಂದು ಆರೋಪಿಸಿದರು.
ಗೌರವಾನ್ವಿತ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ ಶಾಸಕರ ಬಂಧನ ಆಗಬೇಕು. ಉಮಾಪತಿ ಹಾಗೂ ಸಂಗಡಿಗರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ತನಿಖೆ ಫಲಿತಾಂಶದ ನಂತರ ಶಾಸಕತ್ವಕ್ಕೆ ರಾಜೀನಾಮೆ ನೀಡಲು ರಾಜ್ಯಪಾಲರು ಸೂಚಿಸಬೇಕು. ಇಂತಹ ದುರ್ಘಟನೆಗಳು ಮರುಕಳಿದಂತೆ ಪಕ್ಷದ ಮುಖಂಡರು.ಬಾಡಿಗೆ ಗೂಂಡಾಗಳನ್ನು ಹದ್ದುಬಸ್ತಿನಲ್ಲಿ ಇಡಬೇಕು ಎಂದು ಒತ್ತಾಯಿಸಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅದಕ್ಕೆ ಮುನ್ನ ರಂಗನಾಥಸ್ವಾಮಿ ದೇವಸ್ಥಾನದಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದರು.ಪಕ್ಷದ ತಾಲ್ಲೂಕು ಅಧ್ಯಕ್ಷ ದಾನಶೇಖರ, ಜಿಲ್ಲಾ ಉಪಾಧ್ಯಕ್ಷ ಕೆ. ಅಜ್ಜಪ್ಪ, ಪ್ರಧಾನ ಕಾರ್ಯದರ್ಶಿ ಎನ್. ಕುಮಾರ್, ಎಂ. ಫಕೀರಪ್ಪ, ಎಚ್. ಗಣಪತಿ, ಕೆ.ಎಸ್. ಶಾಂತಮ್ಮ, ಎಂ.ಡಿ. ಶೇಖರ್, ಶ್ರೀಪಾದ್ರಾವ್, ಪಿ.ಎಸ್. ಮಂಜುನಾಥ್, ತಾ.ಪಂ. ಸದಸ್ಯ ಬರಗಿ ನಿಂಗಪ್ಪ,ಡಿ.ಕೆ. ಪರಶುರಾಮಪ್ಪ, ಸಂಜೀವ ಹಾಜರಿದ್ದರು.