ಹುಬ್ಬಳ್ಳಿ: ನಗರದ ಮೂರುಸಾವಿರಮಠ ಆವರಣದಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಧಾರವಾಡದ ಕೃಷಿ ವಿವಿ, ಬಾಗಲಕೋಟೆಯ ತೋಟಗಾರಿಕೆ ವಿವಿ, ಹಾಪ್ಕಾಮ್ಸ ಹಾಗೂ ಸಾಂಬಾರ ಮಂಡಳಿ ಹಮ್ಮಿಕೊಂಡಿರುವ 3 ದಿನಗಳ ಮೆಣಸಿನಕಾಯಿ ಮೇಳಕ್ಕೆ ಭಾನುವಾರ ಸಂಜೆ ಚಾಲನೆ ದೊರಕಿತು.
ಕಳೆದ ಮೇಳದಲ್ಲಿ 50 ಮಳಿಗೆಗಳು ಇದ್ದರೆ ಈ ಬಾರಿ ಇದರ ಸಂಖ್ಯೆ 145 ಆಗಿದೆ. ಧಾರವಾಡ ಜಿಲ್ಲೆಯ 142 ಮಳಿಗೆಗಳು ಮೇಳದಲ್ಲಿದ್ದು ಇದರಲ್ಲಿ ಕುಂದಗೋಳ ತಾಲ್ಲೂಕಿನ ಪಾಲು ಹೆಚ್ಚು. ಹುಬ್ಬಳ್ಳಿ ಹಾಗೂ ನವಲಗುಂದ ತಾಲ್ಲೂಕಿನ ರೈತರ ಮಳಿಗೆಗಳು ಕೂಡ ಸಾಕಷ್ಟು ಇವೆ.
ಗದಗ ಜಿಲ್ಲೆಯ ಗಡಿ ಭಾಗಗಳಿಂದ ಆಗಮಿಸಿದ ಮೂವರು ಬೆಳೆಗಾರರ ಮಳಿಗೆಗಳೂ ಇವೆ. ಈ ಭಾಗದ ಪ್ರಮುಖ ತಳಿಗಳಾದ ದೇವನೂರು ಕಡ್ಡಿ ಹಾಗೂ ಡಬ್ಬಿ ಮೆಣಸಿನಕಾಯಿ ಮೇಳದಲ್ಲಿ ಭರ್ಜರಿ ವ್ಯಾಪಾರವಾಗುತ್ತಿದೆ. ಕೆ.ಜಿಗೆ ರೂ 100 250 ರೂಪಾಯಿ ವರೆಗೆ ಬೆಲೆ ಇದೆ. ಸಚಿವ ಜಗದೀಶ ಶೆಟ್ಟರ ಮೇಳ ಉದ್ಘಾಟಿಸಿದರು.
ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ವೀರಭದ್ರಪ್ಪ ಹಾಲಹರವಿ, ಚಂದ್ರಕಾಂತ ಬೆಲ್ಲದ ಮತ್ತಿತರರು ಉಪಸ್ಥಿತರಿದ್ದರು.