ಬೆಂಗಳೂರು: ‘ಅನಗತ್ಯ ಕಾಮಗಾರಿಗಳಿಗೆ ಅನುಮೋದನೆ ನೀಡಿದರೆ ಅಂತಹ ಎಂಜಿನಿಯರ್ಗಳನ್ನು ಆ ಕ್ಷಣವೇ ಮನೆಗೆ ಕಳುಹಿಸುವೆ’ ಎಂದು ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮಿನಾರಾಯಣ ಎಚ್ಚರಿಕೆ ನೀಡಿದರು.
ಏಕಕಾಲಕ್ಕೆ 1,367 ವಾರ್ಡ್ಮಟ್ಟದ ಕಾಮಗಾರಿಗಳಿಗೆ ಸೋಮವಾರ ಕಾರ್ಯದ ಆದೇಶ ನೀಡುವ ಸಮಾರಂಭದಲ್ಲಿ ಅವರು ಮಾತನಾಡಿ, ‘ಬಿಬಿಎಂಪಿ ಆರ್ಥಿಕ ಸ್ಥಿತಿ ಮೊದಲೇ ಕೆಟ್ಟದಾಗಿದೆ. ಅನಗತ್ಯ ಕಾಮಗಾರಿಗಳಿಗೆ ಹುಸಿ ಅಂದಾಜು ಪತ್ರ ಸಿದ್ಧಪಡಿಸಿದ ಎಂಜಿನಿಯರ್ಗಳನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ. ಎಂದರು.
ಬಿಬಿಎಂಪಿ ಸದಸ್ಯರೂ ಅಷ್ಟೇ. ಯಾವ ಕಾಮಗಾರಿಗಳು ತುರ್ತಾಗಿ ಅಗತ್ಯವಿದೆಯೋ, ಅಂಥವುಗಳ ಪ್ರಸ್ತಾವವನ್ನೇ ಆದ್ಯತೆ ಮೇರೆಗೆ ತರಬೇಕು ಎಂದು ಹೇಳಿದರು.
ಮೇಯರ್ ಬಿ.ಎಸ್. ಸತ್ಯನಾರಾಯಣ, ‘ಮುಂದಿನ ಸೋಮವಾರವೇ ಎಲ್ಲ ಕಾಮಗಾರಿಗಳಿಗೂ ಚಾಲನೆ ನೀಡಬೇಕು. ಸಚಿವರಿಗೆ ಕಾಯದೆ ಶಾಸಕರು, ವಾರ್ಡ್ ಸದಸ್ಯರ ಉಪಸ್ಥಿತಿಯಲ್ಲಿ ಭೂಮಿಪೂಜೆ ನೆರವೇರಿಸಬೇಕು’ ಎಂದು ಸೂಚಿಸಿದರು.
‘ಕೆ.ಆರ್. ಮಾರುಕಟ್ಟೆ ಸ್ವಚ್ಛತಾ ಆಂದೋಲನಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಅದನ್ನು ಸೂಪರ್ ಮಾರುಕಟ್ಟೆಗಳ ರೀತಿಯಲ್ಲಿ ಅಭಿವೃದ್ಧಿ ಮಾಡಲಾಗುವುದು. ಕೆ.ಆರ್. ಮಾರುಕಟ್ಟೆಯಲ್ಲಿ ಸ್ವಚ್ಛತೆಯನ್ನು ಕಾಪಾಡಲು ಖಾಸಗಿ ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದರು.
ಬಿಬಿಎಂಪಿ ಇತ್ತೀಚೆಗೆ ಏಕಗವಾಕ್ಷಿ ಯೋಜನೆ ಮೂಲಕ ರೂ 494 ಕೋಟಿ ಮೊತ್ತದ 2,276 ಕಾಮಗಾರಿಗಳಿಗೆ ಟೆಂಡರ್ ಕರೆದಿತ್ತು. ಅರ್ಧದಷ್ಟು ಕಾಮ-ಗಾರಿಗಳಿಗೆ ಮಾತ್ರ ಗುತ್ತಿಗೆದಾರರು ಸ್ಪಂದಿಸಿದ್ದರು.
‘ಬಾಕಿ 1,359 ಕಾಮಗಾರಿಗಳಿಗೆ ಮೂರನೇ ಬಾರಿ ಇನ್ನೊಮ್ಮೆ ಟೆಂಡರ್ ಕರೆಯಲಾಗುತ್ತದೆ. ಆಗ ಸಹ ಯಾರೂ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದಿದ್ದರೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ ಮೂಲಕ ಕಾಮಗಾರಿ ನಡೆಸಲಾಗುವುದು’ ಎಂದು ವಾರ್ಡ್ಮಟ್ಟದ ಕಾಮಗಾರಿಗಳ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಎಚ್. ಬಸವರಾಜು ಹೇಳಿದರು.
ಚರಂಡಿ ನಿರ್ಮಾಣ, ರಸ್ತೆ ದುರಸ್ತಿ, ಫುಟ್ಪಾತ್ ನಿರ್ಮಾಣ, ಉದ್ಯಾನ ಮತ್ತು ಆಟದ ಮೈದಾನಗಳ ನಿರ್ವಹಣೆ, ಬೀದಿ ದೀಪಗಳ ವ್ಯವಸ್ಥೆ ಮತ್ತಿತರ ಕಾಮಗಾರಿಗಳನ್ನು ವಾರ್ಡ್ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿದೆ.