ಅಜ್ಜಂಪುರ: ಪ್ರತಿಯೊಂದು ತರಕಾರಿ ಹಣ್ಣು ಕಾಯಿಗಳಲ್ಲಿರುವ ಪೌಷ್ಠಿಕಾಂಶ, ಔಷಧೀಯ ಗುಣದ ಅರಿವು ಹೊಂದಿ, ಅಗತ್ಯವಾದುದನ್ನು ಸಮಯಕ್ಕೆ ತಕ್ಕಂತೆ ಸೇವಿಸುವ ಮೂಲಕ ಅಪೌಷ್ಠಿಕ ಮುಕ್ತ ಆರೋಗ್ಯಯುಕ್ತ ಜೀವನ ನಡೆಸಬೇಕು ಎಂದು ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಸಮೀಪದ ಕುಡ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ‘ಪೌಷ್ಠಿಕ ಆಹಾರ ಮೇಳ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವಿಧ ಔಷದೀಯ ಪದಾರ್ಥಗಳ ಪರಿಚಯ ಹಾಗೂ ಬಳಕೆಯ ಮಾರ್ಗವನ್ನು ತಿಳಿಸುವ, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಸಲಹೆಗಳನ್ನು ನೀಡುವ ಮೂಲಕ, ಜನರಲ್ಲಿ ಜಾಗೃತಿ ಉಂಟು ಮಾಡುವ ಆಹಾರ ಮೇಳಗಳ ಪ್ರಯೋಜನವನ್ನು ಪಡೆಯಬೇಕೆಂದು ಜನರಿಗೆ ಆರೋಗ್ಯ ನಿರೀಕ್ಷಕ ಸದಾಶಿವ ಸಲಹೆ ನೀಡಿದರು.
ಆಹಾರ ಮೇಳದ ಅಂಗವಾಗಿ ಹಸಿರು ಸೊಪ್ಪು, ತರಕಾರಿ, ಬೇರು, ಕಾಯಿ, ಹಣ್ಣು, ಗಡ್ಡೆಗೆಣಸುಗಳು, ಧಾನ್ಯಗಳು, ಕಷಾಯ, ಪೌಷ್ಠಿಕ ತಿನಿಸುಗಳು ಸೇರಿದಂತೆ ಸುಮಾರು ನೂರಾ ಎಂಬತ್ತು ವಿವಿಧ ರೀತಿಯ ಪದಾರ್ಥಗಳ ಪ್ರದರ್ಶನ ಏರ್ಪಡಿಸಲಾಗಿತ್ತು ಇದನ್ನು ಆರೋಗ್ಯ ಸಮಿತಿ ಅಧ್ಯಕ್ಷ ಉಪ್ಪರಿಗೆ ಶಿವಕುಮಾರ್ ಉದ್ಘಾಟಿಸಿದರು.
ವೈಯಕ್ತಿಕ ಆರೋಗ್ಯ ಮತ್ತು ಸ್ವಚ್ಛತೆ, ವಿವಿಧ ಧಾನ್ಯಗಳು ಮತ್ತು ಔಷಧೀಯ ಗುಣಗಳು, ರೋಗ ಮತ್ತು ನಿಯಂತ್ರಣ ವಿಧಾನಕ್ಕೆ ಸಂಬಂಧಿಸಿದ ಪುಸ್ತಕಗಳ ಪ್ರದರ್ಶನವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಅವರು ಉದ್ಘಾಟಿಸಿದರು.
ಆಶಾ ಮೇಲ್ವಿಚಾರಕಿ ಗೀತಾ, ಉಶಾ, ಆರೋಗ್ಯ ಇಲಾಖೆಯ ನಜ್ಮಾ, ರಶ್ಮಿ, ಪ್ರಮಿಳಾ, ಅಂಗನವಾಡಿ ಕಾರ್ಯಕರ್ತೆ ಗಾಯಿತ್ರಿ, ಸ್ವರ್ಣಾಂಭ, ಸುಮ, ಗ್ರಾಮದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳು, ಕಿಶೋರಿಯರು, ಗರ್ಭಿಣಿಯರು, ಗ್ರಾಮಸ್ಥರು ಭಾಗವಹಿಸಿದ್ದರು.