ಧಾರವಾಡ: ಭಾನುವಾರ ಸಂಜೆ ಇಲ್ಲಿನ ಸೃಜನಾ ರಂಗಮಂದಿರದಲ್ಲಿ ನಡೆಯಬೇಕಿದ್ದ ಕೆ.ಎಸ್.ಪವಿತ್ರಾ ಅವರ ‘ಕ್ರಿಸ್ತಕಾವ್ಯ’ ನೃತ್ಯ ರೂಪಕವನ್ನು ಕೆಲ ಬಲಪಂಥೀಯ ಸಂಘಟನೆಗಳ ಬೆದರಿಕೆಯ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ.
ಶಿವಮೊಗ್ಗದ ಶ್ರೀ ವಿಜಯ ಕಲಾನಿಕೇತನ ಹಾಗೂ ಧಾರವಾಡದ ಇಂಟ್ಯಾಕ್ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಎರಡು ದಿನಗಳ ಹಿಂದೆ ಆಯೋಜಕರಿಗೆ ಕರೆ ಮಾಡಿದ ಕೆಲವರು, ಬಲಪಂಥೀಯ ಸಂಘಟನೆಯೊಂದರ ಹೆಸರು ಹೇಳಿ, ‘ಕ್ರಿಸ್ತಕಾವ್ಯ ನೃತ್ಯ ಮಾಡಿದರೆ ರಂಗಮಂದಿರದ ಎದುರು ಪ್ರತಿಭಟನೆ ನಡೆಸುತ್ತೇವೆ’ ಎಂದು ಬೆದರಿಕೆ ಒಡ್ಡಿದ್ದರಿಂದ ಬೇಸರಗೊಂಡ ಆಯೋಜಕರು ಕಾರ್ಯಕ್ರಮ ರದ್ದುಗೊಳಿಸಿದ್ದಾರೆ.
‘ನಾವು ಅವರಿಗೆ ಹೆದರಿ ಈ ಕಾರ್ಯಕ್ರಮ ರದ್ದುಗೊಳಿಸುತ್ತಿಲ್ಲ. ಆದರೆ, ಅವರ ಬೆದರಿಕೆಯನ್ನು ಖಂಡಿಸುವುದಕ್ಕಾಗಿ ಈ ನಿರ್ಣಯ ಕೈಗೊಂಡಿದ್ದೇವೆ. ಇದರಲ್ಲಿ ಕ್ರಿಸ್ತನ ಜೀವನಕ್ಕಿಂತ ಒಟ್ಟಾರೆ ಮಾನವ ಧರ್ಮ, ಮೌಲ್ಯದ ಕುರಿತು ವಿವರಣೆಯಿತ್ತು. ಡಾ. ದ.ರಾ.ಬೇಂದ್ರೆ, ಡಾ.ಚನ್ನವೀರ ಕಣವಿ ಸೇರಿದಂತೆ ಹಲವು ಕನ್ನಡ ಕವಿಗಳ ಕವಿತೆಗಳನ್ನೇ ಬಳಸಿಕೊಂಡಿದ್ದೆವು. ಆದರೂ ಇದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದು ಬೇಸರ ತಂದಿದೆ’ ಎಂದು ಆಯೋಜಕರು ಹೇಳಿದ್ದಾರೆ.
ಈ ನೃತ್ಯ ಕಾರ್ಯಕ್ರಮದ ಸಂಘಟಕರಲ್ಲೊಬ್ಬರಾದ ಇಂಟ್ಯಾಕ್ ಸಂಸ್ಥೆಯ ಧಾರವಾಡ ಘಟಕದ ಸಂಯೋಜಕ ಎನ್.ಪಿ.ಭಟ್, ‘ಕಲೆಯು ಜಾತಿ, ಭಾಷೆ, ಧರ್ಮಗಳ ಎಲ್ಲೆಯನ್ನೂ ಮೀರಿರುತ್ತದೆ. ಆದರೆ, ಈ ನೃತ್ಯಕ್ಕೆ ಪ್ರತಿರೋಧ ಒಡ್ಡಿದವರ ಮನಸ್ಥಿತಿಯನ್ನು ಕಂಡು ಬೇಸರವಾಗಿದೆ. ಇದು ಸಾಂಸ್ಕೃತಿಕ ನಗರಿ ಧಾರವಾಡಕ್ಕೆ ಶೋಭೆ ತರುವ ಸಂಗತಿಯಲ್ಲ’ ಎಂದು ಅವರು ತಿಳಿಸಿದರು.