ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜ್ಞಾನವೃದ್ಧಿಗೆ ಪತ್ರಿಕೆಗಳ ಓದು ಸಹಕಾರಿ’

Last Updated 23 ಸೆಪ್ಟೆಂಬರ್ 2013, 5:58 IST
ಅಕ್ಷರ ಗಾತ್ರ

ಬಳ್ಳಾರಿ: ಪ್ರಚಲಿತ ವಿದ್ಯಮಾನಗಳನ್ನು ಅರಿಯುವ ನಿಟ್ಟಿನಲ್ಲಿ ಯುವಜನರು  ಪತ್ರಿಕೆಗಳು ಹಾಗೂ ಸಾಹಿತ್ಯದ ಪುಸ್ತಕ ಓದುವುದನ್ನು ರೂಢಿಸಿಕೊಳ್ಳಬೇಕು ಎಂದು ‘ಪ್ರಜಾವಾಣಿ’ಯ ಕಾರ್ಯ­ನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕವು ಸ್ಥಳೀಯ ಶ್ರೀ ಗುರು ತಿಪ್ಪೇರುದ್ರ ಮಹಾವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ‘ಸಂಪಾದಕ­ರೊಂದಿಗೆ ಸಂವಾದ’ ಕಾರ್ಯಕ್ರಮ­ದಲ್ಲಿ ಅವರು ಮಾತನಾಡಿದರು.

ದೈನಂದಿನ ಆಗುಹೋಗು, ದೇಶ ವಿದೇಶಗಳಲ್ಲ ನಡೆಯುವ ಪ್ರತಿದಿನದ ಬೆಳವಣಿಗೆ ಅರಿಯುವ ಜತೆಗೆ ಜ್ಞಾನದ ವೃದ್ಧಿಗಾಗಿ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗಬೇಕು ಎಂದು ಸಲಹೆ ನೀಡಿದರು.

ದೃಶ್ಯ ಮಾಧ್ಯಮವು ರೋಚಕತೆ­ಯನ್ನೇ ಮೂಲವಾಗಿಸಿ­ಕೊಂಡು ಸುದ್ದಿ ಮಾಡುವ ಭರದಲ್ಲಿ, ಸಮಾಜದ ಸ್ವಾಸ್ಥ್ಯವನ್ನು ಮರೆಯುತ್ತಿದೆ. ಈ ಮನಸ್ಥಿತಿಗೆ ತೀವ್ರಗೊಳ್ಳುತ್ತಿರುವ ಸ್ಪರ್ಧೆಯೂ ಕಾರಣವಾಗಿದೆ. ಹಿಂಸೆ ಮತ್ತು ಕ್ರೌರ್ಯವನ್ನು ವೈಭವೀಕರಿ­ಸುತ್ತಿ­ರುವುದು ಅತಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಅನಾರೋಗ್ಯಕರ ಸ್ಪರ್ಧೆಯಿಂದಾಗಿ ಹಾಗೂ ದರ ಸಮರದಿಂದಾಗಿ ರಾಜ್ಯದಲ್ಲಿ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ಆರ್ಥಿಕ ಹಿನ್ನಡೆ ಅನು­ಭವಿಸುತ್ತಿವೆ. ಪತ್ರಿಕೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರೂ ಓದುಗರು ಕೊಂಡು ಓದುವ ಹವ್ಯಾಸ ರೂಢಿಸಿಕೊಳ್ಳುತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ವಿದೇಶಗಳಲ್ಲಿ ಪತ್ರಿಕೆಗಳ ಬೆಲೆ ಅತ್ಯಂತ  ದುಬಾರಿಯಾಗಿದೆ. ಆದರೂ ಅಲ್ಲಿನ ಜನ ದುಡ್ಡು ಕೊಟ್ಟು ಪತ್ರಿಕೆ ಓದುವ ಹವ್ಯಾಸ ಬೆಳಸಿಕೊಂಡಿದ್ದಾರೆ. ಪತ್ರಿಕೆ ಹೊರತರುವ ವೆಚ್ಚವನ್ನು ಸರಿ­ದೂಗಿಸಲು ಸಾಧ್ಯವಾಗದೆ ಮಾಲೀ­ಕರು ಒದ್ದಾಡುವ ಪರಿಸ್ಥಿತಿ ನಿರ್ಮಾಣ­ವಾಗಿದೆ ಎಂದು ಅವರು ಹೇಳಿದರು.

ಸುದ್ದಿವಾಹಿನಿಗಳ ಆಗಮನದ ನಂತರ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಗೊಂದಲಗಳು ಶುರುವಾಗಿವೆ. ಮೊದಲು ಸುದ್ದಿ ನೀಡುವ ಧಾವಂತ­ದಲ್ಲಿ, ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಭರದಲ್ಲಿ ತಪ್ಪು ಎಸಗುತ್ತಿರುವುದು, ದೃಶ್ಯ ಮಾಧ್ಯಮವು ಸಾಮಾಜಿಕ ಕಾಳಜಿ, ಜವಾಬ್ದಾರಿ ಮರೆತು ಕಾರ್ಯ ನಿರ್ವಹಿಸುತ್ತಿದೆ ಎಂಬ ಶಂಕೆ ಮೂಡುತ್ತಿದೆ ಎಂದು ಹೇಳಿದರು.

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಕುಲಸಚಿವ ರಂಗರಾಜ ವನದುರ್ಗ ಮಾತನಾಡಿದರು. ಅಲ್ಲಂ ಕರಿಬಸಪ್ಪ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಪ್ರಾಚಾರ್ಯ ಶಂಭುಲಿಂಗಪ್ಪ ಕಾರ್ಯಕ್ರಮ ಉದ್ಘಾ­ಟಿ­­ಸಿ­ದರು. ಶ್ರೀ ಗುರು ತಿಪ್ಪೇರುದ್ರ ಕಾಲೇಜಿನ ಅಧ್ಯಕ್ಷ ಎಸ್.ಎನ್. ರುದ್ರಪ್ಪ, ಕಾರ್ಯದರ್ಶಿ ಜಿ. ನಾಗರಾಜ್, ಕಸಾಪ ಗೌರವ ಕಾರ್ಯದರ್ಶಿ ಬಾದಾಮಿ ಶಿವಲಿಂಗ  ಉಪಸ್ಥಿತರಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ ಎರಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತ್ಯ ಪರಿಷತ್ತಿನ ಈರಮ್ಮ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT