ಔರಾದ್: ಅಂಗವಿಕಲತೆ ನಡುವೆಯೂ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಸ್ವತಂತ್ರ ಬದುಕು ರೂಪಿಸಿಕೊಂಡ ಯುವಕನೊಬ್ಬನ ಕಥೆ ಇದು.
ಪಟ್ಟಣದ ಖೂಬಾಗಲ್ಲಿ ನಿವಾಸಿ ನಾಗನಾಥ ಶಂಕರರಾವ ಸಗರ (35) ಎಂಬ ಯುವಕ ಅಂಗವೈಕಲ್ಯತೆ ಮೆಟ್ಟಿ ನಿಂತು ಬದುಕು ಕಟ್ಟಿಕೊಂಡಿದ್ದಾರೆ. ಐದನೇ ವರ್ಷದಲ್ಲಿ ಪೋಲಿಯೊ ಎಂಬ ಮಾರಕ ರೋಗಕ್ಕೆ ತುತ್ತಾಗಿ ಎಡಗಾಲಿನ ಶಕ್ತಿಯನ್ನು ಶಾಶ್ವತವಾಗಿ ಕಳೆದುಕೊಂಡ ನಾಗನಾಥ ಧೃತಿಗೆಡಲಿಲ್ಲ.
ಅಣ್ಣನ ಸಹಾಯದಿಂದ ಸರ್ಕಾರಿ ಶಾಲೆಗೆ ಸೇರಿ ಬಿ.ಎ. ವರೆಗೆ ಓದಿದ. ಪಿಯುಸಿಯಿಂದಲೇ ಮನೆ ಪಾಠ ಶುರು ಮಾಡಿ ಪಠ್ಯಪುಸ್ತಕ, ಶಾಲಾ ಶುಲ್ಕ ಸೇರಿದಂತೆ ತನ್ನ ಖರ್ಚು ತಾನೇ ನೋಡಿಕೊಳ್ಳುತ್ತಿದ್ದರು. ಮುಂದೆ ಬಿ.ಎಡ್. ಮಾಡಿಕೊಂಡು ಈಗ ಖಾಯಂ ಆಗಿ ಮನೆ ಪಾಠ ಕಾಯಕ ಮಾಡಿಕೊಂಡಿದ್ದಾರೆ. ಗಣಿತ ಮತ್ತು ಇಂಗ್ಲಿಷ್ ವಿಷಯ ಕಲಿಸುತ್ತಾರೆ. ಮನೆ ಪಾಠಕ್ಕೆ ವಿದ್ಯಾರ್ಥಿಗಳ ಕೊರತೆ ಇಲ್ಲ. ಬೆಳಿಗ್ಗೆ 20 ಮತ್ತು ಸಂಜೆ 20 ಮಕ್ಕಳಿಗೆ ಪಾಠ ಮಾಡುತ್ತಾರೆ. ಉಳಿದ ಅವಧಿಯಲ್ಲಿ ಮನೆ ಎದುರಿನ ಕಿರಾಣಿ ಅಂಗಡಿಯಲ್ಲಿ ಕಾಯಕ ನಡೆಯುತ್ತದೆ.
ಮಹಾರಾಷ್ಟ್ರದ ಚಂದ್ರಕಲಾ ಜೊತೆ ವಿವಾಹವಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಕರುಳ ಕುಡಿ ಇಲ್ಲದಿದ್ದರೂ ಅಣ್ಣನ ಎರಡು ವರ್ಷದ ಮಗನನ್ನು ದತ್ತು ತೆಗೆದುಕೊಂಡಿದ್ದಾರೆ. ಮೈತುಂಬಾ ಕೆಲಸ ಇದೆ. ಸ್ವಂತ ಮಕ್ಕಳಿಲ್ಲ ಎಂಬ ಚಿಂತೆ ಇಲ್ಲ. ಸರ್ಕಾರ ತಿಂಗಳಿಗೆ ರೂ. 1200 ಮಾಸಾಶನ ಕೊಡುತ್ತದೆ. ಬೀದರ್ನ ಶಾಹೀನ್ ಶಿಕ್ಷಣ ಸಂಸ್ಥೆ ಮೂರು ಚಕ್ರದ ಸೈಕಲ್ ನೀಡಿದೆ. ಒಟ್ಟಿನಲ್ಲಿ ಅಂಗವಿಕಲ ಎಂಬುದನ್ನೂ ಮರೆತು ಸಂತೋಷದಿಂದ ಬದುಕುತ್ತಿದ್ದೇನೆ ಎಂದು ಹೇಳುತ್ತಾರೆ ನಾಗನಾಥ.
–