ಬೆಂಗಳೂರು: ಇತರ ರಾಷ್ಟ್ರಗಳ ಪ್ರಜೆಗಳಿಗಿಂತ ಭಾರತೀಯರು ಸರಾಸರಿ 10 ವರ್ಷ ಮೊದಲು ಮಧುಮೇಹಕ್ಕೆ ತುತ್ತಾಗುತ್ತಾರೆ ಎಂದು ಸುನಯನ ಕಣ್ಣಿನ ಆಸ್ಪತ್ರೆಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಸುಜಾತಾ ಮೂರ್ತಿ ಹೇಳಿದರು.
ಬೆಂಗಳೂರು ಸಾಮಾಜಿಕ ವಿಜ್ಞಾನ ವೇದಿಕೆ ನ್ಯಾಷನಲ್ ಕಾಲೇಜಿನ ಎಚ್.ಎನ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ಮಧುಮೇಹಿಗಳ ರಾಜಧಾನಿಯಾಗುತ್ತಿದ್ದು ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಸುಮಾರು 4 ಕೋಟಿ ಮಂದಿ ಮಧುಮೇಹಿಗಳಿದ್ದಾರೆ ಎಂದರು.
ಸುನಯನ ಕಣ್ಣಿನ ಆಸ್ಪತ್ರೆಯ ಅಧ್ಯಕ್ಷ ಡಾ.ಕೆ.ವಿ.ನರಸಿಂಹಮೂರ್ತಿ ಮಾತನಾಡಿ, ‘ಆಹಾರ ಮತ್ತು ಉತ್ತಮ ಜೀವನ ಶೈಲಿಯ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದಾಗಿದೆ. ಅಲೋಪಥಿ ಔಷಧ ಬಳಕೆ ದೀರ್ಘಾವಧಿಯಲ್ಲಿ ಕಿಡ್ನಿಯ ತೊಂದರೆಗೆ ಕಾರಣವಾಗುತ್ತದೆ’ ಎಂದರು.
ವೇದಿಕೆಯ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.