ಬೆಂಗಳೂರು: ‘ದೇಶದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಸಮಸ್ಯೆ ಹಾಗೂ ನಿಯಂತ್ರಣದ ಕುರಿತು ಭಾರತ ಮತ್ತು ಅಮೆರಿಕದ ಆರೋಗ್ಯ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ಯೋಜಿಸಲಾಗಿದೆ’ ಎಂದು ಎಂ.ಎಸ್.ರಾಮಯ್ಯ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ನರೇಶ್ ಶೆಟ್ಟಿ ಹೇಳಿದರು.
ಈ ಕುರಿತು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬದಲಾದ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿ ರಕ್ತದೊತ್ತಡ, ಬೊಜ್ಜು, ಮಧುಮೇಹದಂತಹ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಇವು ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತಕ್ಕೆ ಕಾರಣವಾಗಿವೆ. ಈ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಮೂಲಕ ಹೃದ್ರೋಗವನ್ನು ನಿಯಂತ್ರಿಸುವುದು ನಮ್ಮ ಗುರಿಯಾಗಿದೆ’ ಎಂದು ತಿಳಿಸಿದರು.
ಚಿಕಾಗೋದ ಯುಐಸಿಯ ಡಾ. ಬೆಳ್ಳೂರು ಎಸ್. ಪ್ರಭಾಕರ್ ಮಾತನಾಡಿ, ‘ಸಮೂಹ ಆರೋಗ್ಯ ನಮ್ಮ ಮುಖ್ಯ ಉದ್ದೇಶ’ ಎಂದರು.
ಗೋಷ್ಠಿಯಲ್ಲಿ ಚಿಕಾಗೋದ ಆ. ತಿಮೊಥಿ ಎರಿಕ್ಸನ್, ಡಾ. ಟೆರ್ರಿ ವಾಂಡನ್ ಹೊಕ್, ಡಾ. ಡಿ.ಸಿ. ಸುಂದರೇಶ್, ಡಾ. ವಿ.ಎಸ್.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.