ನೆಲಮಂಗಲ: ‘ಕನ್ನಡ ಪದ ಸಂಪತ್ತು ಆದರ್ಶವನ್ನು ಬೆಳೆಸುತ್ತಿದೆ. ಉತ್ತಮ ಚಿಂತನೆಗಳನ್ನು ಮೂಡಿಸುವ ಆಚಾರ, ವಿಚಾರ, ಸಂಸ್ಕೃತಿಯನ್ನು ತಿಳಿಸಿಕೊ ಡುತ್ತದೆ, ಕನ್ನಡದ ಭಾಷಾ ಪ್ರೌಢಿಮೆ ತಿಳಿದುಕೊಳ್ಳಲು ಹೆಚ್ಚು ಹೆಚ್ಚು ಪುಸ್ತಕಗಳನ್ನು ಅಧ್ಯಯನ ಮಾಡಬೇಕು ಎಂದು ಸಂಪನ್ಮೂಲ ವ್ಯಕ್ತಿ ಓಂಕಾರ ಪ್ರಿಯ ಬಾಗೆಪಲ್ಲಿ ಕೆ.ನಾಗರಾಜು ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗವು ಬಾಗೆಪಲ್ಲಿಯ ಕನ್ನಡ ಸಂಸ್ಕೃತಿ ಸೇವಾಭಾರತಿಯ ಸಹಯೋಗದಲ್ಲಿ ಏರ್ಪಡಿಸಿದ್ದ ‘ಕನ್ನಡ ಪದ ಸಂಪತ್ತು’ 910ನೇ ವಿಶೇಷ ಉಪನ್ಯಾಸ ಕಮ್ಮಟವನ್ನು ಅವರು ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಪರಮಶಿವಯ್ಯ ಅವರು ಕಾಲೇಜಿನ ಆವರಣದಲ್ಲಿ ಸಸಿ ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ನಾಡಾಗಲಿ ಹಸಿರು, ಕನ್ನಡವಾಗಲಿ ಉಸಿರು ಎಂದರು. ನೆಲದನಿ ಬಾನುಲಿ ಕೇಂದ್ರದ ನಿರ್ದೇಶಕ ವೆಂಕಟೇಶ್ ಚೌಥಾಯಿ ಭಾಷೆಯ ಬಳಕೆಯ ಮಹತ್ವ ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರೌಢಶಾಲೆಗೆ ನೀರು ಶುದ್ಧೀಕರಣ ಯಂತ್ರವನ್ನು ಕೊಡುಗೆಯಾಗಿ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ವ್ಯವಸ್ಥಾಪಕ ಗುರುರಾಜ್ ಗಲಗಲಿ ಅವರನ್ನು ಉಪಪ್ರಾಂಶುಪಾಲ ಶಿವ ಕುಮಾರಸ್ವಾಮಿ ಸನ್ಮಾನಿಸಿದರು.