ವಾಷಿಂಗ್ಟನ್ (ಪಿಟಿಐ): ಮುಂದಿನ ವರ್ಷದೊಳಗಾಗಿ ಭಾರತದ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನರಿಗೆ `ಆಧಾರ್ ಕಾರ್ಡ್' ನೀಡುವ ಗುರಿ ಇದೆ ಎಂದು `ಭಾರತೀಯ ವಿಶಿಷ್ಟ ಗುರುತಿನ ಚೀಟಿ ಸಂಖ್ಯೆ ಪ್ರಾಧಿಕಾರ'(ಯುಐಡಿಎಐ) ಅಧ್ಯಕ್ಷ ನಂದನ್ ನಿಲೇಕಣಿ ಹೇಳಿದ್ದಾರೆ.
ಇಲ್ಲಿನ ಜಾಗತಿಕ ಅಭಿವೃದ್ಧಿ ಕೇಂದ್ರ ಆಯೋಜಿಸಿದ್ದ `ಆಧಾರ್ ಅನುಭವ' ಕುರಿತ ವಾರ್ಷಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರದ ಮಹತ್ವಾಕಾಂಕ್ಷೆಯ `ಯುಐಡಿಎಐ' ಯೋಜನೆಯಡಿ 2014ರ ಅಂತ್ಯದೊಳಗೆ ಪ್ರತಿ ಮೂವರು ಭಾರತೀಯರಲ್ಲಿ ಒಬ್ಬರು ಆಧಾರ್ ಕಾರ್ಡ್ ಹೊಂದಿರುತ್ತಾರೆ. ಯೋಜನೆ ಆರಂಭವಾದ ಕೆಲವೇ ವರ್ಷಗಳಲ್ಲಿ 38 ಕೋಟಿ ನಾಗರಿಕರಿಗೆ ವಿಶಿಷ್ಟ ಗುರುತಿನ ಚೀಟಿ ವಿತರಿಸಲಾಗಿದೆ. ಪ್ರತಿ ನಾಗರಿಕರಿಗೂ ಆಧಾರ್ ಕಾರ್ಡ್ ವಿತರಿಸಲು ಇನ್ನೂ ಕೆಲವು ವರ್ಷ ಬೇಕಾಗಬಹುದು ಎಂದರು.
ದೇಶದಲ್ಲಿ 25ರಿಂದ 30 ಸಾವಿರ ಆಧಾರ್ ನೋಂದಣಿ ಕೇಂದ್ರಗಳಿದ್ದು, ಪ್ರತಿ ದಿನ 10 ಲಕ್ಷ ಜನರು ಹೆಸರು ನೋಂದಾಯಿಸಿಕೊಳ್ಳುತ್ತಾರೆ. ಈ ವರ್ಷಾಂತ್ಯ ವೇಳೆಗೆ 40 ಕೋಟಿ ಹಾಗೂ ಮುಂದಿನ ವರ್ಷದೊಳಗಾಗಿ 6 ಕೋಟಿ ನಾಗರಿಕರಿಗೆ ಆಧಾರ್ ಕಾರ್ಡ್ ನೀಡುವ ಗುರಿ ಇದೆ ಎಂದು ವಿವರಿಸಿದರು.
ವಿವಿಧ ಸೇವೆಗಳನ್ನು ಪಡೆಯಲು ಪ್ರಮುಖ ದಾಖಲೆಯಾಗಿರುವ ಆಧಾರ್ ಕಾರ್ಡ್ `ಪಾಸ್ ಪೋರ್ಟ್'ನ ಸ್ಥಾನಮಾನ ಪಡೆದಿದೆ ಎಂದೂ ಅವರು ತಿಳಿಸಿದರು.