ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಂದಾಯ: ನಕಲಿ ದಾಖಲೆ ಸೃಷ್ಠಿ ತಡೆಗೆ ‘ಭೂ ಸುರಕ್ಷಾ ಯೋಜನೆ’ ಪ್ರಾಯೋಗಿಕ ಜಾರಿ

Published 16 ಫೆಬ್ರುವರಿ 2024, 8:04 IST
Last Updated 16 ಫೆಬ್ರುವರಿ 2024, 8:04 IST
ಅಕ್ಷರ ಗಾತ್ರ

ಬೆಂಗಳೂರು: ಕಂದಾಯ ಇಲಾಖೆಯ ಭೂಮಿ, ಸರ್ವೆ ಮತ್ತು ನೋಂದಣಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಗಣಕೀಕರಣಗೊಳಿಸಿ, ಶಿಥಿಲಾವಸ್ಥೆಯಲ್ಲಿರುವ ದಾಖಲೆಗಳನ್ನು ಶಾಶ್ವತವಾಗಿ ಉಳಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಲು ಅವಕಾಶವಿರದಂತೆ ಗಣಕೀಕೃತ ದಾಖಲೆಗಳನ್ನು ನಾಗರಿಕರು, ಸ್ವತಃ ಆನ್‌ಲೈನ್‌ನಲ್ಲಿ ಪಡೆದುಕೊಳ್ಳಲು ಅನುವಾಗುವಂತೆ ಭೂ ಸುರಕ್ಷಾ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ಬಜೆಟ್‌ನಲ್ಲಿ ಕಂದಾಯ ಇಲಾಖೆಗೆ ಸಿಕ್ಕಿದ್ದು..

* ಆಕಾರ್‌ಬಂದ್‌ ಮತ್ತು ಆರ್.ಟಿ.ಸಿ.ಯಲ್ಲಿನ ವಿಸ್ತೀರ್ಣವನ್ನು ಹೊಂದಾಣಿಕೆ ಮಾಡುವ ಮೂಲಕ ಹಿಡುವಳಿದಾರರಿಗೆ ತ್ವರಿತ ಸೇವೆ ಒದಗಿಸಲು ಆಕಾರ್‌ಬಂದ್‌ಗಳ ಗಣಕೀಕರಣ ಕಾರ್ಯವನ್ನು ಕೈಗೊಳ್ಳಲಾಗುವುದು.

* ಬಹು ಮಾಲೀಕತ್ವವುಳ್ಳ ಪಹಣಿಗಳನ್ನು ಅಳತೆಗೆ ಒಳಪಡಿಸುವ ಮೂಲಕ ಪ್ರತಿ ಹಿಡುವಳಿದಾರರಿಗೆ ಪೋಡಿ ಮಾಡಿ ಪ್ರತ್ಯೇಕ ಆರ್.ಟಿ.ಸಿ.ಯನ್ನು ವಿತರಿಸುವ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು. ಬಾಕಿ ಉಳಿದಿರುವ ಗ್ರಾಮಗಳನ್ನು ಪೋಡಿ ಅಭಿಯಾನ 2.0 ರಡಿ ಪೋಡಿ ಮುಕ್ತ ಮಾಡಲು ಆದ್ಯತೆ ಮೇರೆಗೆ ಕ್ರಮ ವಹಿಸಲಾಗುವುದು.

* ದರಖಾಸ್ತು ಪೋಡಿ ಅಭಿಯಾನದಡಿ ರೈತರ ಜಮೀನಿನ ದುರಸ್ತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು, ಯಾವುದೇ ತಕರಾರು ಇಲ್ಲದೆ ಇರುವ ಜಮೀನುಗಳಿಗೆ ಸರ್ಕಾರದಿಂದ ಸ್ವಯಂ ಪ್ರೇರಿತವಾಗಿ

* ರಾಜ್ಯದಲ್ಲಿನ ಸುಮಾರು 30,700 ಗ್ರಾಮ ಠಾಣಾ ಪ್ರದೇಶಗಳನ್ನು ಹಂತ ಹಂತವಾಗಿ ಡ್ರೋನ್ ಮುಖಾಂತರ ಸರ್ವೆ ಮಾಡಿಸಿ ಆಸ್ತಿ ಮತ್ತು ಹಕ್ಕು ದಾಖಲಾತಿಗಳನ್ನು ಭೂ ಮಾಲೀಕರಿಗೆ ವಿತರಿಸುವ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುವುದು.

* ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ನೋಟೀಸುರಹಿತ ಮ್ಯುಟೇಷನ್ಗಳು (ಪೌತಿ ಖಾತೆ ಮತ್ತು ಜೆ-ಸ್ಲಿಪ್ ಮುಖಾಂತರ ಆಗುವ ಮ್ಯುಟೇಷನ್ಗಳನ್ನು ಹೊರತುಪಡಿಸಿ) ನಿಗದಿತ ತಂತ್ರಾಂಶದಲ್ಲಿ ಸ್ವಯಂ-ಚಾಲಿತವಾಗಿ ಅನುಮೋದನೆಯಾಗುವಂತೆ ಕ್ರಮವಹಿಸಲಾಗುವುದು.

* ಆಧುನಿಕ ಉಪಕರಣಗಳ ಮುಖಾಂತರ ಕಡಿಮೆ ಅವಧಿಯಲ್ಲಿ ಭೂಮಾಪನ ಕಾರ್ಯಗಳನ್ನು ಕೈಗೊಂಡು ನಿಖರವಾದ ಡಿಜಿಟಲ್‌ ದಾಖಲೆಗಳನ್ನು ಸಿದ್ಧಪಡಿಸಿ ಸಾರ್ವಜನಿಕರಿಗೆ ಒದಗಿಸಲಾಗುವುದು ಮತ್ತು ಇದಕ್ಕೆ ಅಗತ್ಯವಾದ ಡ್ರೋನ್‌ ಮತ್ತಿತರ ಉಪಕರಣಗಳನ್ನು ಎಲ್ಲಾ ಜಿಲ್ಲೆಗಳಲ್ಲಿನ ಭೂಮಾಪನಾ ಕಛೇರಿಗಳಿಗೆ ನೀಡಲಾಗುವುದು.

* ಡಿಜಿ ಕಂದಾಯ ಯೋಜನೆಯಡಿ ಕಂದಾಯ ಇಲಾಖೆಯು ನೀಡುವ ಎಲ್ಲಾ ಸೇವೆಗಳನ್ನು ಪಾರದರ್ಶಕವಾಗಿ ಮತ್ತು ತ್ವರಿತವಾಗಿ ಡಿಜಿಟಲ್ ಪ್ಲಾಟ್ಫಾರಂ ಮೂಲಕ ಸಾರ್ವಜನಿಕರಿಗೆ ಒದಗಿಸಲು ಕ್ರಮ ವಹಿಸಲಾಗುವುದು. ಇ-ಆಫೀಸ್ ವ್ಯವಸ್ಥೆಯನ್ನು, ಇಲಾಖೆಯ ಗ್ರಾಮಮಟ್ಟದವರೆಗೆ ವಿಸ್ತರಿಸಲಾಗುವುದು ಮತ್ತು ಇದಕ್ಕಾಗಿ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರಿಗೆ ಲ್ಯಾಪ್ಟಾಪ್ ನೀಡಲಾಗುವುದು.

* ಸರ್ಕಾರವು ದಾಖಲೆ ರಹಿತ ಜನವಸತಿ ಪ್ರದೇಶಗಳಾದ ತಾಂಡ, ಹಟ್ಟಿ, ಹಾಡಿ, ದೊಡ್ಡಿ, ಪಾಳ್ಯ, ಮಜರೆ, ಕ್ಯಾಂಪ್, ಕಾಲೋನಿ ಇತ್ಯಾದಿಗಳನ್ನು ಗುರುತಿಸಿ ಹೊಸ ಕಂದಾಯ ಗ್ರಾಮ ಹಾಗೂ ಉಪ ಗ್ರಾಮಗಳೆಂದು ಘೋಷಿಸಿದ್ದು, ಅಲ್ಲಿನ ಸುಮಾರು ೨ ಲಕ್ಷ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲು ಕ್ರಮವಹಿಸಲಾಗುವುದು.

* ಭೂ-ಮಾಪನ ಇಲಾಖೆಗೆ ಸೇರಿದ 240 ಅಭಿಲೇಖಾಲಯ ಕೊಠಡಿಗಳನ್ನು ಆಧುನೀಕರಣಗೊಳಿಸುವ ಮೂಲಕ ಕಂದಾಯ ದಾಖಲೆಗಳನ್ನು ಪಾರದರ್ಶಕ ಹಾಗೂ ಆನ್ಲೈನ್ ವ್ಯವಸ್ಥೆ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು.

* ಭೂಮಿ ತಂತ್ರಾಂಶದಲ್ಲಿ ಫ್ಲಾಗ್ ಮಾಡಲಾಗಿರುವ ಸರ್ಕಾರಿ ಜಮೀನಿನ ಪಹಣಿಗಳನ್ನು ಲ್ಯಾಂಡ್‌ ಬೀಟ್‌ ಆಪ್‌ ಬಳಸಿ, ಗ್ರಾಮ ಆಡಳಿತ ಅಧಿಕಾರಿಗಳ ಮುಖಾಂತರ ಸರ್ಕಾರಿ ಜಮೀನಿನ ಒತ್ತುವರಿ ಹಾಗೂ ಸಂರಕ್ಷಣೆ ಕುರಿತು ನಿಗಾ ವಹಿಸಲಾಗುವುದು.

* ಪ್ರಸಕ್ತ ಸಾಲಿನಲ್ಲಿ ೪೨ ತಾಲ್ಲೂಕಾ ಆಡಳಿತ ಸೌಧದ ಕಾಮಗಾರಿಗಳಿಗೆ ೮೦ ಕೋಟಿ ರೂ. ಹಾಗೂ ೧೪ ಜಿಲ್ಲಾಡಳಿತ ಸೌಧದ ಕಾಮಗಾರಿಗಳಿಗೆ ೫೦ ಕೋಟಿ ರೂ. ಒದಗಿಸಲಾಗಿದೆ. ವಿಜಯಪುರ ಮತ್ತು ಬೀದರ್ ಜಿಲ್ಲೆಗಳಲ್ಲಿ ಹೊಸ ಜಿಲ್ಲಾಡಳಿತ ಕಛೇರಿಗಳು ಹಾಗೂ ಅಗತ್ಯವಿರುವ ತಾಲ್ಲೂಕುಗಳಲ್ಲಿ ತಾಲ್ಲೂಕಾ ಆಡಳಿತ ಕಚೇರಿಗಳನ್ನು ನಿರ್ಮಿಸಲಾಗುವುದು.

* 2023-24ರಲ್ಲಿ ರಾಜ್ಯದ 223 ತಾಲ್ಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ಸಂಕಷ್ಟಕ್ಕೆ ಸಿಲುಕಿದ ಕರ್ನಾಟಕದ ರೈತರಿಗೆ ತುಸು ನೆಮ್ಮದಿ ನೀಡಲು NDRF ನಿಧಿಯಿಂದ

18,171 ಕೋಟಿ ರೂ.ಗಳ ಬರ ಪರಿಹಾರವನ್ನು ರಾಜ್ಯಕ್ಕೆ ನೀಡಲು ಕೋರಿ ಕೇಂದ್ರ ಸರ್ಕಾರಕ್ಕೆ 3 ಮೆಮೊರಾಂಡಮ್‌ಗಳನ್ನು ಸಲ್ಲಿಸಿದ್ದರೂ ಸಹ ಕೇಂದ್ರ ಸರ್ಕಾರವು ಯಾವುದೇ ರೀತಿಯ ಸ್ಪಂದನೆಯನ್ನು ನೀಡಿರುವುದಿಲ್ಲ. ಆದಾಗ್ಯೂ ಕೇಂದ್ರ ಸರ್ಕಾರದ ಅನುದಾನಕ್ಕೆ ಕಾಯದೇ ಬರವನ್ನು ಸಮರ್ಥವಾಗಿ ನಿಭಾಯಿಸಲು ರಾಜ್ಯ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ;

• 33.19 ಲಕ್ಷ ರೈತರಿಗೆ ತಲಾ 2,000 ರೂ.ಗಳವರೆಗೆ ಇನ್‌ಪುಟ್‌ ಸಬ್ಸಿಡಿ, 629 ಕೋಟಿ ರೂ. ಅನುದಾನವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ.

• ಬರದ ತೀವ್ರತೆಯನ್ನು ತಗ್ಗಿಸಲು 20 ಕೋಟಿ ರೂ.ಗಳ ವೆಚ್ಚದಲ್ಲಿ ಮಿನಿ ಮೇವಿನ ಕಿಟ್‌ ವಿತರಿಸಲಾಗುತ್ತಿದೆ.

• ಅಂತರ್ಜಲ ಮಟ್ಟ ವೃದ್ಧಿಸಲು ಕೃಷಿ ಭಾಗ್ಯ ಯೋಜನೆಯಡಿಯಲ್ಲಿ 200 ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದೆ.

• ಸಣ್ಣ ನೀರಾವರಿ ಇಲಾಖೆಯ ಮೂಲಕ 100 ಕೋಟಿ ರೂ.ಗಳ ವೆಚ್ಚದ ಜಲ ಸಂರಕ್ಷಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

• ಪ್ರಸಕ್ತ ಸಾಲಿನಲ್ಲಿ ರಾಜ್ಯ ವಿಪತ್ತು ಉಪಶಮನ ನಿಧಿಯಿಂದ ಒಟ್ಟು 500 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಬರ ಉಪಶಮನ ಕ್ರಮಗಳನ್ನು ತೆಗೆದುಕೊಳ್ಳಲು ಕ್ರಮವಹಿಸಲಾಗುವುದು.

* ಶಾಲಾ ಮಕ್ಕಳಿಗೆ ಹವಾಮಾನ ಬದಲಾವಣೆಯ ಪರಿಣಾಮದ ದೃಶ್ಯಗಳು ಮತ್ತು ಹವಾಮಾನ ಬದಲಾವಣೆ ಪರಿಹಾರಗಳ ಕುರಿತು ಅರಿವು ಮೂಡಿಸಲು ಹವಾಮಾನ ಬದಲಾವಣೆ ಅನುಭವ ಕೇಂದ್ರವನ್ನು 10 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಾರಂಭಿಸಲಾಗುವುದು.

ನೋಂದಣಿ ಪ್ರಕ್ರಿಯೆಯಲ್ಲಿ ನಾಗರಿಕ ಸ್ನೇಹಿ ಸುಧಾರಣೆಗಳನ್ನು ತರಲು ಈ ಕೆಳಕಂಡ ಉಪಕ್ರಮಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ;

– ಕಡ್ಡಾಯವಾಗಿ ನೋಂದಾಯಿಸಬಹುದಾದ ಆಯ್ದ ದಾಖಲೆಗಳ ಇ-ನೋಂದಣಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಎರಡು ಪಕ್ಷಗಳ ಉಪಸ್ಥಿತಿಯಿಲ್ಲದೆ ನೋಂದಣಿ ಮಾಡಲು ಕ್ರಮ.

– Anytime Anywhere Registration ಕಾರ್ಯಕ್ರಮವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲು ನೋಂದಣಿ ಮತ್ತು ಮುದ್ರಾಂಕ ಕಾಯ್ದೆಗಳಿಗೆ ತಿದ್ದುಪಡಿ.

– ಸ್ಥಿರಾಸ್ತಿ ನೋಂದಣಿಗೆ ಸಂಬಂಧಿಸಿದ ಎಲ್ಲಾ ತಂತ್ರಾಂಶಗಳ ಏಕೀಕರಣ.

– ನಾಗರಿಕರ ಅನುಕೂಲಕ್ಕಾಗಿ ಭಾನುವಾರ ಸಹ ಆಯ್ದ ಉಪ ನೋಂದಣಾಧಿಕಾರಿ ಕಛೇರಿಯನ್ನು ತೆರೆಯಲಾಗುವುದು.

* ನಾಗರಿಕರು ದೃಢೀಕೃತ ಪ್ರತಿಗಳನ್ನು ಪಡೆಯುವಲ್ಲಿನ ವಿಳಂಬವನ್ನು ತಗ್ಗಿಸಲು ಕೇಂದ್ರೀಕೃತ ವರ್ಚುವಲ್ ವಿತರಣಾ ವ್ಯವಸ್ಥೆಯ ಮೂಲಕ ದಾಖಲೆಗಳ ವಿತರಣೆಯನ್ನು ಸ್ವಯಂಚಾಲಿತಗೊಳಿಸಲಾಗುವುದು.

* ಪಾರದರ್ಶಕವಾಗಿ ಯಾವುದೇ ರೀತಿಯ ತೊಂದರೆಗಳಿಲ್ಲದೆ ನೋಂದಣಿ ಕೆಲಸವನ್ನು ಸಾರ್ವಜನಿಕರಿಗೆ ತಲುಪಿಸಲು ನಿಯಮಗಳಿಗೆ ಅಗತ್ಯ ತಿದ್ದುಪಡಿಗಳನ್ನು ತರಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT