ನವದೆಹಲಿ: ಹಣ ಅಕ್ರಮ ಸಂಗ್ರಹ ಪ್ರಕರಣದಲ್ಲಿ ಭಾಗಿಯಾಗಿರುವ ಪರ್ಲ್ಸ್ ಆಗ್ರೊಟೆಕ್ ಕಾರ್ಪೊರೇಷನ್ ಲಿಮಿಟೆಡ್ನಲ್ಲಿ (ಪಿಎಸಿಎಲ್) ಹೂಡಿಕೆ ಮಾಡಿದ್ದ 21 ಲಕ್ಷ ಹೂಡಿಕೆದಾರರಿಗೆ ₹1,022 ಕೋಟಿ ಮೊತ್ತವನ್ನು ಮರುಪಾವತಿ ಮಾಡಲಾಗಿದೆ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಗುರುವಾರ ತಿಳಿಸಿದೆ.
‘ಪಿಎಸಿಎಲ್’ ಕಾನೂನುಬಾಹಿರವಾದ ಹೂಡಿಕೆ ಯೋಜನೆಗಳಲ್ಲಿ ತೊಡಗಿತ್ತು. ಕೃಷಿ ಮತ್ತು ರಿಯಲ್ ಎಸ್ಟೇಟ್ ವಹಿವಾಟಿನ ಹೆಸರಿನಡಿ ಸಾರ್ವಜನಿಕರಿಂದ ₹60 ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ಸಂಗ್ರಹಿಸಿರುವುದನ್ನು ಸೆಬಿ ಪತ್ತೆ ಹಚ್ಚಿತ್ತು. ಹೂಡಿಕೆದಾರರಿಗೆ ಹಣ ಹಿಂದಿರುಗಿಸುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಅವರ ನೇತೃತ್ವದಡಿ ಸಮಿತಿ ರಚಿಸಿತ್ತು.
ಒಟ್ಟು ₹19 ಸಾವಿರ ಕೋಟಿ ಮೊತ್ತದಲ್ಲಿ ಅರ್ಹರಿಗೆ ಹಣ ಮರುಪಾವತಿ ಮಾಡುವಲ್ಲಿ ಸಮಿತಿಯ ಯಶಸ್ವಿಯಾಗಿದೆ ಎಂದು ಸೆಬಿ ತಿಳಿಸಿದೆ.
ಸಕಾಲದಲ್ಲಿ ಹೂಡಿಕೆದಾರರಿಗೆ ಹಣ ಹಿಂದಿರುಗಿಸುವಲ್ಲಿ ಪಿಎಸಿಎಲ್ ಮತ್ತು ಅದರ 9 ಪ್ರವರ್ತಕರು, ನಿರ್ದೇಶಕರು ವಿಫಲರಾಗಿದ್ದರು. ಹಾಗಾಗಿ, 2015ರಲ್ಲಿ ಅವರಿಗೆ ಸೇರಿದ ಸ್ವತ್ತುಗಳನ್ನು ಜಪ್ತಿ ಮಾಡಲು ಆದೇಶಿಸಿತ್ತು.