ನವದೆಹಲಿ: ದೀಪಾವಳಿಯ ಕೊಡುಗೆಯ ರೂಪದಲ್ಲಿ ಕೇಂದ್ರ ಸರ್ಕಾರವು ₹ 2 ಕೋಟಿಯವರೆಗಿನ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ ಮಾಡಿದೆ. ಇದರಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ₹ 6,500 ಕೋಟಿ ಹೊರೆಯಾಗುವ ಸಾಧ್ಯತೆ ಇದೆ.
ಮಾರ್ಚ್ 1 ರಿಂದ ಆಗಸ್ಟ್ 31ರವರೆಗಿನ ಸಾಲದ ಕಂತು ಮರುಪಾವತಿ ಮುಂದೂಡಿಕೆ ಅವಧಿಗೆ ಅನ್ವಯಿಸುವಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯೋಜನೆಯ ಪ್ರಯೋಜನ ಪಡೆದವರು, ಪಡೆಯದೇ ಇರುವವರಿಗೂ ಇದರ ಲಾಭ ದೊರೆಯಲಿದೆ ಎಂದು ಶುಕ್ರವಾರ ತಡರಾತ್ರಿ ಕೇಂದ್ರ ಸರ್ಕಾರ ಘೋಷಿಸಿದೆ.
ಎಂಎಸ್ಎಂಇ ಸಾಲ, ಶಿಕ್ಷಣ ಸಾಲ, ಗೃಹ ಸಾಲ, ಗ್ರಾಹಕ ಬಳಕೆ ವಸ್ತುಗಳು ಖರೀದಿಗೆ ಸಾಲ, ಕ್ರೆಡಿಟ್ ಕಾರ್ಡ್ ಬಾಕಿ, ವಾಹನ ಸಾಲ, ವೈಯಕ್ತಿಕ ಸಾಲ, ಉಪಭೋಗದ ಸಾಲ ಪಡೆದವರಿಗೆ ಅನ್ವಯವಾಗಲಿದೆ.
ಅಕ್ಟೋಬರ್ 14ರಂದು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಶೀಘ್ರವೇ ಚಕ್ರಬಡ್ಡಿ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಸಾಮಾನ್ಯ ಜನರ ದೀಪಾವಳಿ ಸಂಭ್ರಮ ಈಗ ಕೇಂದ್ರ ಸರ್ಕಾರದ ಕೈಯಲ್ಲಿದೆ. ಹೀಗಾಗಿ ಚಕ್ರಬಡ್ಡಿ ಮನ್ನಾ ಮಾಡುವ ಕುರಿತಾದ ಅಧಿಸೂಚನೆಯನ್ನು ನವೆಂಬರ್ 2ರೊಳಗೆ ಹೊರಡಿಸುವಂತೆ ಕೇಂದ್ರಕ್ಕೆ ಸೂಚಿಸಿತ್ತು.