ನವದೆಹಲಿ: ನಷ್ಟದಲ್ಲಿರುವ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಕಂಪನಿಗಳನ್ನು ವಿಲೀನಗೊಳಿಸುವ ಪ್ರಸ್ತಾವನೆಯ ಕುರಿತುದೂರಸಂಪರ್ಕ ಇಲಾಖೆಯು ಕಾರ್ಯಪ್ರವೃತ್ತವಾಗಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ಸ್ವಾಮ್ಯದ ಈ ಎರಡೂ ಕಂಪನಿಗಳ ಪುನಶ್ಚೇತನಕ್ಕೆ ವಿಲೀನಗೊಳಿಸುವುದು ಒಂದು ಆಯ್ಕೆಯಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಸಂಪುಟ ಅಂತಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಈ ಕಂಪನಿಗಳು ನಷ್ಟದಲ್ಲಿದ್ದು, ಸಿಬ್ಬಂದಿಗೆ ವೇತನ ನೀಡುವುದಕ್ಕೂ ಪರದಾಡುತ್ತಿವೆ.
ಸದ್ಯದ ಪರಿಸ್ಥಿತಿ ಗಮನಿಸಿದರೆ, ಎಂಟಿಎನ್ಎಲ್ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದು ಕಷ್ಟ. ಹೀಗಾಗಿ ಅದನ್ನು ಬಿಎಸ್ಎನ್ಎಲ್ ಜತೆಗೆ ವಿಲೀನಗೊಳಿಸುವುದೇ ಸೂಕ್ತ. ಈ ಬಗ್ಗೆ ಉನ್ನತ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.
ಎಂಟಿಎನ್ಎಲ್, ದೆಹಲಿ ಮತ್ತು ಮುಂಬೈನಲ್ಲಿ ಸೇವೆ ನೀಡುತ್ತಿದೆ. ದೇಶದ ಉಳಿದ ವೃತ್ತಗಳಲ್ಲಿ ಬಿಎಸ್ಎನ್ಎಲ್ ಕಾರ್ಯನಿರ್ವಹಿಸುತ್ತಿದೆ.
ಕಂಪನಿಗಳಿಗೆ ಪುನಶ್ಚೇತನ ಕೊಡುಗೆಯನ್ನೂ ಇಲಾಖೆ ಸಿದ್ಧಪಡಿಸುತ್ತಿದೆ. ಸ್ವಯಂ ನಿವೃತ್ತಿ ಯೋಜನೆಗಳು, ಆಸ್ತಿ ನಗದೀಕರಣ ಮತ್ತು 4ಜಿ ತರಂಗಾಂತರ ಹಂಚಿಕೆಯ ಮಾರ್ಗಗಳನ್ನು ಪ್ರಸ್ತಾಪಿಸಿದೆ.