ಮುಂಬೈ: ‘ಪೆಟ್ರೋಲ್, ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ಏರಿಕೆ ಕುರಿತು ಪರಾಮರ್ಶೆ ನಡೆಸುವ ಅಗತ್ಯ ಇದೆ’ ಎಂದು ರೆವಿನ್ಯೂ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಅಭಿಪ್ರಾಯಪಟ್ಟಿದ್ದಾರೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ ಕಾಣುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಎಕ್ಸೈಸ್ ಸುಂಕ ಹೆಚ್ಚಿಸಲು ಚಿಂತನೆ ನಡೆಸುತ್ತಿದೆ ಎನ್ನುವ ವರದಿಗಳ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಪ್ರತಿ ಲೀಟರ್ ಮೇಲೆ ₹ 1 ರಿಂದ ₹ 2ರಂತೆ ಎಕ್ಸೈಸ್ ಸುಂಕ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು,‘ಸದ್ಯಕ್ಕೆ ಏನನ್ನೂ ಹೇಳಲು ಆಗುವುದಿಲ್ಲ. ಈ ಬಗ್ಗೆ ಪರಾಮರ್ಶೆ ನಡೆಸುವ ಅಗತ್ಯ ಇದೆ’ ಎಂದಿದ್ದಾರೆ.
ಇಂಧನ ದರಗಳು ಗರಿಷ್ಠ ಮಟ್ಟಕ್ಕೆ ತಲುಪಿದಾಗ ಸಾರ್ವಜನಿಕರ ಒತ್ತಾಯದ ಮೇರೆಗೆ ಅಕ್ಟೋಬರ್ನಲ್ಲಿ ಪ್ರತಿ ಲೀಟರಿಗೆ ₹ 1.50ರಷ್ಟು ಎಕ್ಸೈಸ್ ಸುಂಕ ತಗ್ಗಿಸಲಾಗಿತ್ತು. ತೈಲ ಕಂಪನಿಗಳು ಸಹ ಪ್ರತಿ ಲೀಟರ್ ಬೆಲೆಯನ್ನು ₹ 1 ಕಡಿಮೆ ಮಾಡುವಂತೆ ಸರ್ಕಾರ ಸೂಚನೆ ನೀಡಿತ್ತು.