ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಲ್ಲಿ ₹ 95,700 ಕೋಟಿ ಮೊತ್ತದ ವಂಚನೆ ನಡೆದಿದೆ.
ಏಪ್ರಿಲ್ 1 ರಿಂದ ಸೆಪ್ಟೆಂಬರ್ 30ರವರೆಗಿನ ಅವಧಿಯಲ್ಲಿ ₹ 95,760 ಕೋಟಿ ಮೊತ್ತದ 5,743 ವಂಚನೆ ಪ್ರಕರಣಗಳು ನಡೆದಿವೆ ಎಂದು ಮಂಗಳವಾರ ಸಂಸತ್ತಿಗೆ ಮಾಹಿತಿ ನೀಡಲಾಗಿದೆ.
‘ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕಾರ್ಯನಿರ್ವಹಿಸದ 3.38 ಲಕ್ಷ ಕಂಪನಿಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಪಿಎಂಸಿ: ಪಂಜಾಬ್ ಆ್ಯಂಡ್ ಮಹಾರಾಷ್ಟ್ರ ಕೋ–ಆಪರೇಟಿವ್ (ಪಿಎಂಸಿ) ಬ್ಯಾಂಕ್ನಿಂದ ಹಣ ಹಿಂದೆ ಪಡೆಯುವ ಮಿತಿಯನ್ನು ₹ 50 ಸಾವಿರಕ್ಕೆ ಹೆಚ್ಚಿಸಿದ ನಂತರ ಬ್ಯಾಂಕ್ನ ಶೇ 78ರಷ್ಟು ಗ್ರಾಹಕರು ತಮ್ಮ ಖಾತೆಯಲ್ಲಿನ ಸಂಪೂರ್ಣ ಹಣವನ್ನು ವಾಪಸ್ ಪಡೆದಂತಾಗಿದೆ ಎಂದು ಸರ್ಕಾರ ತಿಳಿಸಿದೆ.
ನಿರ್ಬಂಧ ವಿಧಿಸಿದ ಸಂದರ್ಭದಲ್ಲಿ ಒಟ್ಟು 9.15 ಲಕ್ಷ ಠೇವಣಿದಾರರು ಇದ್ದರು.
ಮುಂಬೈ ವರದಿ: ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಪಿಎಂಸಿ ಬ್ಯಾಂಕ್ ಖಾತೆಯಿಂದ ₹ 1 ಲಕ್ಷದವರೆಗೆ ಹಣ ಹಿಂದೆ ಪಡೆಯಲು ಠೇವಣಿದಾರರು ತಾನು ನೇಮಿಸಿದ ಅಧಿಕಾರಿಯನ್ನು ಸಂಪರ್ಕಿಸಬಹುದು ಎಂದು ಆರ್ಬಿಐ ಬಾಂಬೆ ಹೈಕೋರ್ಟ್ಗೆ ತಿಳಿಸಿದೆ.